Sunday, July 25, 2010

3. ಹನುಮದ್ವಿಕಾಸಕ್ಕೆ ಎಲ್ಲಿ ಎಲ್ಲೆ?

ಜೀಮರಿ ಮೂರ್ಖರ ಪೆಟ್ಟಿಗೆ ಹಾಕಿಕೊಂಡು ನೋಡುತ್ತಿತ್ತು. ಹುಡುಗರೋ ಹುಡುಗಿಯರೋ ತಿಳಿಯದಂತಹ ಹತ್ತಾರು ಕೈ ಕಾಲುಗಳು ಒಂದರ ಮೇಲೊಂದು ಬಿದ್ದು ಕಿತ್ತಾಡಿಕೊಂಡು ಎಳೆದಾಡುವ ದೃಶ್ಯ. ಕೀಂಕೀಂಕೀಂ ಎನ್ನುವ ಒಂದು ಶಬ್ದ ಮಾತ್ರ ಹಿನ್ನೆಲೆ ಸಂಗೀತ. ಬೇರೇನೂ ಇಲ್ಲ. "ಪಾಪ ಮಗು ಓದಿಕೊಳ್ತಿದೆ, ಇದೇನು ಶಬ್ದ!" ಅಂತ ಕಾಳಜಿಯಿಂದ ಶ್ರೀಮತೀಜೀ ಅಡುಗೆಮನೆಯಿಂದಲೂ, ಟೀವಿಯೊಳಗೆ ಯಾವ ಜೀರುಂಡೆ ನುಗ್ಗಿದೆ ಅಂತ ತಲೆಕೆಟ್ಟು ಶ್ರೀಮಾನ್-ಜಿ ಪಡಸಾಲೆಯಿಂದಲೂ ಬಂದು ನೋಡಿದರೆ......ನೋಡೋದೇನು! ಪುಸ್ತಕ ಎಸೆದು ಕೈಯಲ್ಲಿ ಚಿಪ್ಸು ಹಿಡಿದ ಜೀಮರಿ; ಎದುರಲ್ಲಿ ಟೀವಿ; ಎಳೆದಾಟ, ಉರುಳಾಟ, ಕುರುಕ್ಷೇತ್ರ!

"ನಾನಾವಾಗಲೇ ಬಡಕೊಂಡೆ. ಚಾನೆಲ್ ಛತ್ರಿ ಬೇಡಾ ಅಂತ. ಕೇಳಿದಿರಾ? ಈಗ ನೋಡಿ, ನಿಮ್ಮ ಮುದ್ದಾಣಿ ಯಾವುದೋ ಹಾಳು ಬಾಕ್ಸಿಂಗು, ಡಬ್ಲ್ಯೂ ಡಬ್ಲ್ಯೂ ಎಫ್ ಹಾಕ್ಕೊಂಡು ಕೂತಿದೆ. ಇವನನ್ನ ಸುಧಾರಿಸೋದು ನನ್ನ ಕೈಲಿ ಆಗಲ್ಲಪ್ಪ!" ಅಂತ ಶ್ರೀಮತಿಪೀಠಿಕೆ ಹಾಕಿದರು.

"ನಿಂದೊಳ್ಳೆ ಕತೆಯಾಯ್ತಲ್ಲೇ! ನೋಡ್ಕೊಂಡು ಮಾತಾಡು ಅವನೇನು ನೋಡ್ತಾ ಇದಾನೆ ಅನ್ನೋದನ್ನು! ಅದು ನ್ಯಾಷನಲ್ ನ್ಯೂಸು. ಬಾಕ್ಸಿಂಗ್ ಅಲ್ಲ. ಬಿಹಾರ ವಿಧಾನಸಭೆ ತೋರಿಸ್ತ ಇದಾರೆ" ಅಂತ ಜೀ ಎಗರಾಡಿದರು. "ನಿಮ್ಮ ಮಗ ನೋಡಿ ಹೀಗೆ.." ಅಂತ ಯಾರಾದರೂ ಪೀಠಿಕೆ ಹಾಕಿ ಉಗಿಯಲು ಶುರು ಮಾಡಿದರೆ, ಶ್ರೀಮಾನ್-ಜಿ ಅಂಥವರ ಜನ್ಮ ಜಾಲಾಡಿ ಬಿಡುತ್ತಾರೆ. ಇನ್ನು ಸ್ವಂತ ಹೆಂಡತಿಯೇ ಹರಿಹಾಯ್ದರೆ ಬಿಡ್ತಾರೆಯೇ? ಮಗನ ಪರ ವಹಿಸಿಕೊಂಡು ಆಕೆಗೆ ಮಾತಿನಿಂದ ಜಾಡಿಸಿದರು. ಜೀಮರಿಗೆ ತಲೆಕೆಟ್ಟು ಹೋಯಿತು.

"ಅಯ್ಯೋ ಸ್ವಲ್ಪ ನಿಲ್ಲಿಸ್ತೀರ? ಪ್ರೋಗ್ರಾಮಲ್ಲಿ ಅವರೇನು ಹೇಳ್ತಿದಾರೆ ಅಂತ ಗೊತ್ತಾಗೋದು ಮೊದಲೇ ಕಷ್ಟ. ಅದರ ಮಧ್ಯೆ ನಿಮ್ಮ ಉಪದ್ವ್ಯಾಪ!" ಅಂತ ಕಿರುಚಿದ.

"ಹೌದೂ.. ನೀನೀಗ ನೋಡೋದೇನು ಹೇಳು! ಬಾಕ್ಸಿಂಗಾ ಬಿಹಾರ ಅಸೆಂಬ್ಲಿನಾ? " - ಗಂಡ ಹೆಂಡತಿ ಇಬ್ಬರೂ ಒಕ್ಕೊರಲಿನಿಂದ ಕೇಳಿದರು.

"ಎರಡೂ ಅಲ್ಲ! ಇದು ಸ್ಪ್ಲಿ
ಟ್ಸ್ ವಿಲ್ಲ ! ಎಂಟೀವಿಯ ರಿಯಾಲಿಟಿ ಶೋ" ಅಂತು ಜೀಮರಿ.

"ಹಾಗಾದ್ರೆ ಬಂದ್ ಮಾಡು, ಮುಟ್ಟಾಳ!" ಅಂತ ಅಬ್ಬರಿಸುವ ಸರದಿ ಜೀಯದ್ದು, ಈಗ. ಎಂಟೀವಿ ಅಂದರೆ ಮೈಮೇಲೆ ಒಂದು ಚೇಳು ಕುಟುಕುಟು ಓಡಾಡಿದ ಅನುಭವ ಅವರಿಗೆ.

"ನೋಡಿ ನೋಡಿ, ನಾನು ಹೇಳಿಲ್ಲವಾ? ದರಿದ್ರ ಮುಂಡೇದು ನೋಡೋದು ಬೇಡಾದ್ದೇ..." ಅಂತ ಕಾವೇರಿ-ಭಾಗೀರಥಿಯರನ್ನು ಕಣ್ಣ ಕಟ್ಟೆಯಲ್ಲಿ ಆವಾಹಿಸಿಕೊಂಡು ಕುಸಿದರು ಶ್ರೀಮತೀಜೀ.

"ಏನಯ್ಯ ಅದು ಮನೆಯಲ್ಲಿ ಮಹಾಭಾರತ ನಡೀತಿದೆ! ಒಂದಿನವಾದರೂ ಮುತ್ತೈದೆಯನ್ನ ನಗಿಸಬಾರದೇನಯ್ಯ?" ಅಂತ ತಾಂಬೂಲ ಜಗಿಯುತ್ತಾ ಒಳಗೆ ಬಂದರು ಘಾ ಸಾಹೇಬರು. ಬೇಡವಾದ ಸಂದರ್ಭಗಳಲ್ಲಿ ದಿಡೀರನೆ ಪ್ರತ್ಯಕ್ಷವಾಗುವ ಅಪರೂಪದ ವರ ಅವರ ಜನ್ಮಜಾತ
ಸಿದ್ಧಿ. ಹಾಗಾಗಿ ಬಂದು ನಿಂತು, ಜೀಮರಿ - ಟೀವಿ - ಶ್ರೀಮತೀಜೀ ಯರತ್ತ ನೋಡಿ ಕೊನೆಗೆ ಶ್ರೀಮಾನ್-ಜಿಹೆಗಲ ಮೇಲೆ ಕೈ ಹಾಕಿದರು.

"ಏನಯ್ಯ ಹೇಳೋದು. ದರಿದ್ರದ್ದು ನೋಡು, ಬೇಡವಾದ್ದನ್ನೇ ನೋಡುತ್ತೆ. ಚತ್ರೀನೆ ಕಿತ್ತು ಬಿಸಾಕ್ತೀನಿ ಒಂದಿನ " ಅಂತಬೇಜಾರು ತೋಡಿಕೊಂಡರು ಜೀ.

"ಅಲ್ಲಯ್ಯ, ನಿನ್ನ ಹುಡುಗ ಎಷ್ಟೋ ವಾಸಿ. ನಮ್ಮ ಹುಡುಗನ್ನ ನೋಡು. ಕಿವಿಗೆ ಯಾವುದೋ ತಗಡು ನೇತಾಡಿಸಿಕೊಂಡು ಓಡಾಡ್ತಿದೆ. ಕತ್ತಿಗೆ ಹಾಕಿದ ಚೈನಲ್ಲಿ ಒಂದು ತಲೆ ಬುರುಡೆ! ಅವನ ಪ್ಯಾಂಟು ಸೊಂಟದಲ್ಲಿ ನಿಲ್ಲೋದಿಲ್ಲ. ತಿಕದ ಸೀಳು ಕಾಣೋ ಹಾಗೆ ತ್ರಿಶಂಕುಸ್ಥಿತಿಯಲ್ಲಿ ನೇತಾಡತದೆ. ಅವನೆದುರು ನಿಮ್ಮ ಹುಡುಗ ಎಷ್ಟೋ ವಾಸಿ ಕಣಯ್ಯಾ!" ಅಂತ ನಿಟ್ಟುಸಿರು ಬಿಟ್ಟರು ಘಾ.

"ನಾವು ಕಾಲೇಜಿಗೆ ಹೋಗ್ತಿದ್ದಾಗಿನ ಕಾಲ ನೆಪ್ಪು ಮಾಡಿಕೊ ಮಹರಾಯ! ಎಷ್ಟೊಂದು ದೈವಭಕ್ತಿ ಇಟ್ಟುಕೊಂಡು ಶೃದ್ಧೆಯಿಂದ ಹೋಗ್ತಾ ಇದ್ದಿವಿ. ಇವಕ್ಕೆ ಏನೂ ಇಲ್ಲವಲ್ಲಯ್ಯ!" ಎನ್ನುತ್ತ ಜೀ, ಮರಿ ತಲೆ ಕುಟುಕಿದರು.

"ಬಿಡಯ್ಯ . ಅವಕ್ಕೂ ಒಂದು ದಿನ ಅರ್ಥವಾಗುತ್ತೆ. ನಾವು ಹೇಳೋದೆಲ್ಲ ನೀರ ಮೇಲಿನ ಹೋಮ", ಘಾ ಹಾಗೆ ಹೇಳುತ್ತಾ ಶ್ರೀಮತೀಜೀಯನ್ನೂ ಅದುಗೆಮನೆಯನ್ನೂ ಬಹಳ ಸಾಂಕೇತಿಕವಾಗಿ ನೋಡಿದರು. "ಕಾಫಿ ಚಿಪ್ಸು ಏನಾದ್ರೂ ಬರುತ್ತೋ?" ಅನ್ನುವುದು ಸಂಕೇತದ ಗೂಡಾರ್ಥ. ಅದು ಆಕೆಗೂ ಗೊತ್ತು. ಎದ್ದು ಅಡುಗೆಮನೆಗೆ ಹೋದರು.

"ಅದೆಲ್ಲ ಬಿಡು, ಅಪ್ಪನ ಕಿಸೆಯಿಂದ ಪೈಸೆ ಕದ್ದು ಟೆಂಟಿಗೆ ಕದ್ದು ಹೋಗಿ ಹೆಲೆನನ್ನು ನೋಡ್ತಿದ್ದ ಅನುಭವ ಹೇಗಿತ್ತು ಹೇಳಯ್ಯ!" ಅಂತ ಘಾ ಜಾತಕ ಬಿಚ್ಚಿದರು. ಜೀಗೆ ಇದೆಲ್ಲ ಹೀಗೆ ಪಬ್ಲಿಕ್ಕಾಗುವುದು ಇಷ್ಟವಾಗಲಿಲ್ಲ. "ಸರಿ, ಚಾವಡಿಗೆ ಹೋಗಿ ಕೂತು ಮಾತಾಡೋಣ" ಅಂತ ಘಾರನ್ನು ಎಬ್ಬಿಸಿಕೊಂಡು (ದಬ್ಬಿಕೊಂಡು?) ಹೋದರು. ರಣರಂಗವಾಗಲಿದ್ದ ರೂಮು, ಮಳೆ ಬಂದು ನಿಂತ ಗದ್ದೆಯ ಹಾಗೆ ಮೌನವಾಗಿದ್ದು ಖುಷಿಯಾಗಿ ಜೀಮರಿ ಕಣ್ಣುಗುಡ್ಡೆಗಳನ್ನು ಹೊರಹಾಕಿಕೊಂಡು ಎಂಟೀವಿಯ ಒಳ ಹೋದ.

********************************************************************************

ಚಾವಡಿಗೆ ಬರುತ್ತಲೇ ಘಾ ಕುಸಿದರು. ಮುಖದಲ್ಲಿ ಪ್ರೇತಕಳೆ. "ಯಾಕೋ ಏನಾಯ್ತು?" ಅಂತ ಜೀ ವಿಚಾರಿಸಿದರು, ಗುಂಡಿ ಬಿಚ್ಚಿಗಾಳಿ ಹಾಕಿದರು. ಬೆಂಗಳೂರಲ್ಲಿ ಹನಿಮಳೆ ಬಿದ್ದರೆ ರಸ್ತೆಯಲ್ಲಿ ನೆರೆಯೇಳುವ ಹಾಗೆ, ಘಾ ಮುಖದಲ್ಲಿ ಬೆವರಿನ ಸೆಲೆ ಒಡೆಯಿತು.

"ಏನೂಂತ ಹೇಳಲಿ ಮಾರಾಯ! ನಿನ್ನೆಯಷ್ಟೇ ನಮ್ಮ ಹುಡುಗನ ಕಾಲೇಜಿಗೆ ಹೋಗಿ ಬಂದೆ. ಅವನ ಕಾಲೇಜಿಂದ ಒಂದು ಫೋನ್ಕಾಲ್ ಬಂದಿತ್ತು . ತುರ್ತಾಗಿ ಬಂದು ಕಾಣಿ" ಅಂತ.

"ಹೌದೇ? ಏನು ವಿಚಾರ?"

"ಹೇಳೋದೇನು? ನಮ್ಮ ಹುಡುಗ ಪರೀಕ್ಷೆಯಲ್ಲಿ ಅದ್ಭುತವಾದ ಉತ್ತರ ಬರ್ದಿದಾನೆ ಅಂತ ನನ್ನನ್ನು ಕರೆದು ಸನ್ಮಾನ ಮಾಡಿದರು"

"ಬಿಡಿಸಿ ಹೇಳಯ್ಯ!"

"ಅವನು ಗಣಿತ ಪೇಪರಲ್ಲಿ ದೊಡ್ಡದಾಗಿ ಬರ್ದಿದಾನೆ: ಇದು ನನ್ನ ಜೀವನದ ಪ್ರಶ್ನೆ. ಉತ್ತರ ಬರೆಯಲೇಬೇಕಾದ ತುರ್ತು. ಆದರೆ ನಾನು ಓದಿದ್ದು ಬಿಟ್ಟು ಉಳಿದೆಲ್ಲಾ ಮೂಲೆಯಿಂದ ಪ್ರಶ್ನೆ ಕೇಳಿ ನನ್ನ ಕೈ ಕಟ್ಟಿ ಹಾಕ್ಬಿಟ್ಟಿದೀರಿ! ಹಾಗಾಗಿ, ನಿಮ್ಮ ತಪ್ಪಿಗೆ ನೀವೇಪ್ರಾಯಶ್ಚಿತ್ತ ಮಾಡಬೇಕು. ಖಾಲಿ ಹಾಳೆಗೆ ಭರ್ತಿ ಮಾರ್ಕು ಹಾಕಿ ನನ್ನನ್ನು ದಡ ಮುಟ್ಟಿಸಬೇಕು. ತಪ್ಪಿದರೆ, ಕಾಲೇಜು ಹೊರಗೆ ಗ್ಯಾಂಗ್ ಕಟ್ಟಿಕೊಂಡು ನಿಮ್ಮ ವಿಚಾರಣೆ ಮಾಡಬೇಕಾಗುತ್ತೆ. ಎಚ್ಚರ!, ಅಂತ ಬರ್ದಿದಾನಲ್ಲಯ್ಯ!"

ಅಪ್ಪನಿಗೆ ತಕ್ಕ ಮಗ ಅನ್ನಿಸಿತು ಜೀಗೆ. ಆದರೆ ಹೇಳಕ್ಕಾಗುತ್ಯೆ? ಒಂದು ಸಂತಾಪ ಸೂಚಕ ಅಭಿನಯ ಮಾಡಿದರು.

"ಪೇಪರು ಪ್ರಿನ್ಸಿಪಾಲ್ ವರೆಗೂ ಹೋಯ್ತಂತೆ. ಅವರು ಇವನನ್ನ ಕರೆದು ಸರಿಯಾದ ವಿಚಾರಣೆ ಮಾಡಿದರಂತೆ. ಅಪ್ಪನ್ನ ಕರ್ಕೊಂಬಾ ಅಂದರಂತೆ. ಇಂವಾ, "ಅಪ್ಪನನ್ನು ಯಾಕೆ ಕರ್ಕಂಬರ್ಲಿ. ತಪ್ಪು ಮಾಡಿದ್ದು ನಾನು. ನನಗೆ ಶಿಕ್ಷೆ ಕೊಡಿ" ಅಂದನಂತೆ. ಅದಕ್ಕವರು ಇದು ನಿನ್ನ ತಪ್ಪಲ್ಲಪ್ಪ, ನಿನ್ನನ್ನ ಹುಟ್ಟಿಸಿದವರ ತಪ್ಪು" ಅಂದರಂತೆ ಕಣಯ್ಯಾ!" ಅಂತ ಗಳಗಳ ಅಳಹತ್ತಿದರು ಘಾ.

"ಹಾಕು ಒಂದು ಮಾನನಷ್ಟ ಮೊಕದ್ದಮೆ!" ಅಂತ ಜೀಯ ಪುಕ್ಕಟೆ ಸಲಹೆ.

"ಆದರೆ ತಪ್ಪು ನನ್ನಲ್ಲೇ ಇದೆಯಲ್ಲಯ್ಯ! ಬಡ್ಡೀಮಗ ಏನಂದ ಗೊತ್ತ? ನನ್ನ ಅಪ್ಪ ತೀರ್ಕೊಂಡು ಎರಡು ವರ್ಷ ಆಗಿದೆ. ಇರೋದು ಅಮ್ಮ ಒಬ್ಬರೇ. ಅವರೂ ಹಾರ್ಟ್ ಪೇಷಂಟು. ಅದೂ ಇದೂ ಅಂತ ವುವುಜೆಲ ಊದಿದ್ದಾನೆ. ಇವನ ಕರುಣಾಜನಕ ಕತೆಗೆ ಅವರೂ ಕರಗಿ ನೀರಾಗಿ "ಸರಿ, ಹಾಗಾದರೆ ಅಮ್ಮನ್ನೇ ಕರ್ಕೊಂಬಾ" ಅಂದರಂತೆ.

"ಪರ್ವಾಗಿಲ್ವೆ! ನಿನ್ನ ಮಗನ ಪಿತೃಭಕ್ತಿ ಮೆಚ್ಚಬೇಕಾದ್ದೆ ಕಣಯ್ಯಾ. ನಿನಗೆ ತಿಳಿಯಬಾರದು ಅಂತ ಎಷ್ಟು ಕಾಳಜಿ ವಹಿಸಿದಾನೆ ನೋಡು!"

"ಕಾಳಜಿ ಏನು ಮಣ್ಣು! ಬೋಳೀಮಗ, ಅಮ್ಮ ಅಂತ ಹೇಳ್ಕೊಂಡು ಯಾವ್ದೋ ಹಾಳು ಹೆಂಗಸನ್ನ ಬುಕ್ ಮಾಡ್ಕೊಂಡು ಕರಕೊಂಡು ಹೋದನಂತೆ. ಪ್ರಿನ್ಸಿಪಾಲು ಸಿಕ್ಕಿದ್ದೇ ಸೀಕರಣೆ ಅಂತ ಯಮ್ಮನನ್ನು ಎದುರು ಕೂರಿಸಿಕೊಂಡು ಇವನಿಗೆ ಅರ್ಚನೆ ಮಾಡಿದರಂತೆ. ಯಮ್ಮನೂ ತಲೆಕೆಟ್ಟು ಇವನ ಕಪಾಳಕ್ಕೆ ಎರಡು ಬಾರಿಸಿದಳಂತೆ. ಆಮೇಲೆ ಪ್ರಿನ್ಸಿಪಾಲಿಗೆ ಭಯವಾಗಿ "ಸರಿ, ಇಲ್ಲಿಗೆ ವಿಷಯ ನಿಲ್ಸೋಣ. ದಯವಿಟ್ಟು ಹೊಡೆದಾಟ ಮಾಡಬೇಡಿ" ಅಂತ ಬೇಡಿಕೊಂಡು ಅವಳನ್ನ ಕಳಿಸಿಕೊಟ್ಟರಂತೆ."

"ಮುಗೀತಲ್ಲ ಪ್ರಕರಣ, ಮತ್ತೆ ನೀನ್ಯಾಕೆ ಹೋದೆಯಪ್ಪ!"

" ಪ್ರಿನ್ಸಿಪಾಲು ಮೊದಲೇ ಬಯಾಲಜಿ ಪ್ರೊಫೆಸರು. ಅವಳಿಗೂ ಇವನಿಗೂ ಬಯಲಾಜಿಕಾಲ್ ಸಿಮಿಲಾರಿಟಿ ಇಲ್ಲವಲ್ಲ ಅಂತ ಅವರಿಗೆ ಡೌಟು ಬಂದು ಸ್ವಲ್ಪ ಸಂಶೋಧನೆ ಮಾಡಿದರಂತೆ. ಆಮೇಲೆ ಗೊತ್ತಾಯ್ತು - ಯಮ್ಮ ಇವನ ಅಮ್ಮ ಅಲ್ಲ, ಕಾಲೇಜಿನ ಎದುರಿನ ಸಿಗರೇಟ್ ಅಂಗಡಿ ಸುಬ್ಬಮ್ಮ ಅಂತ.."

"ಅಂತೂ ನಿನ್ನ ಮಗನ ಪ್ಲಾನೆಲ್ಲ ಟುಸ್ ಆಯ್ತು ಅನ್ನು!"

"ಆಗೋದೇನು. ಅವನ ಭೂತ ಬಿಡಿಸಿ ಮನೇಲಿ ಹಾಕಿದ್ದೇನೆ. ಅದಕ್ಕೆ ಸುಸ್ತು ಕಣಯ್ಯಾ!" ಅಂತ ಮತ್ತೆ ಬೆವರೊರೆಸಿಕೊಂಡರು ಘಾ. "ನಮ್ಮ ಕಾಲಾನೇ ವಾಸಿ. ನನ್ ಮಕ್ಳಿಗೆ ಅಪ್ಪ ಅಮ್ಮನ ಮೇಲೂ ಪ್ರೀತಿ ವಿಶ್ವಾಸ ಇಲ್ಲವಲ್ಲ!" ಅಂತ ಘಾಗೆ ಬೇಜಾರು, ಬುಳುಬುಳು ದುಕ್ಕ.

"ನಮ್ಮ ಹುಡುಗನ ಮಾರ್ಕ್-ಕಾರ್ಡಿನ ತುಂಬಾ ಉದ್ದುದ್ದ ಕೆಂಪು ಗೀಟು ಬಿದ್ದ ಮೇಲೆ ನಾನೂ ಅವನ ಸ್ಕೂಲಿಗೆ ಹೋಗಿದ್ದೆ. ಅಲ್ಲಿ ನನ್ನಹಾಗೆಯೇ ದುಖಪೂರಿತ ತಂದೆಯೊಬ್ಬರು ಬಂದಿದ್ದರು. ಅವರು ಹೆಡ್ ಮಾಸ್ಟರ್ ಹತ್ತಿರ ಏನು ಹೇಳಿದರು ಗೊತ್ತ?" ಅಂತ ಜೀ ತನ್ನ ರೀಲು ಬಿಚ್ಚಕ್ಕೆ ಶುರುಮಾಡಿದರು.

"ಏನು??", ಘಾ ಕಣ್ಣು ಊರಗಲವಾಯಿತು. ತನ್ನ ಹಾಗೆಯೇ ಜೀಯೂ ಸಮದುಖಿಯೇ? - ಅಂತ ಘಾ ಸಾಹೇಬರಿಗೆ ಆಸೆ ಮತ್ತು ಆತಂಕ.

"ಹೆಡ್ ಮೇಸ್ಟ್ರೆ, ನಮ್ ಹುಡುಗನಿಗೆ ಶಬ್ದ, ಕಿರಿಕಿರಿ, ತೊಂದ್ರೆ ಆಗಬಾರದು ಅಂತ ಪ್ರತ್ಯೇಕ ರೂಂ ಮಾಡಿದೆ. ಬೇಕುಬೇಕಾದ ಪುಸ್ತಕತರಿಸಿದೆ. ಬೇಕು ಅಂದ ಸಿಡಿ ಎಲ್ಲ ತಂದು ಕೊಟ್ಟೆ. ಟಾಟಾ ಸ್ಕೈ ಯಲ್ಲಿ ಅದೇನೋ "ಆಕ್ಟಿವ್ ಸ್ಟಡಿ" ಅಂತ ಬರುತ್ತಂತೆ. ಅದಕ್ಕೇ ಅಂತ ಒಂದು ಪ್ಲಾಸ್ಮಾ ಟೀವಿ ಅವನ ರೂಮಲ್ಲಿ ಹಾಕಿ ಟಾಟಾ ಕನೆಕ್ಷನ್ ಕೊಡಿಸಿದೆ. ಎಜುಕೆಶನ್ನಿಗೆ ಬೇಕಾದ ಡಿವಿಡಿ ಎಲ್ಲ ಎನ್ಸೀಯಾರ್ಟಿಯಿಂದ ತರಿಸಿದೆ. ಡಿವಿಡಿ ಪ್ಲೇಯರ್ ಫಿಕ್ಸ್ ಮಾಡಿದೆ. ಬೇಕುಬೇಕಾದ ಮಾಹಿತಿಯೆಲ್ಲ ಕೈಯಳೆತೆಗೆ ಸಿಗಬೇಕು ಅಂತಒಂದು ಕಂಪ್ಯೂಟರೂ ಇಂಟರ್ನೆಟ್ ಕನೆಕ್ಷನ್ನೂ ಕೊಡಿಸಿದೆ. ಹೇಳಿ ಮೇಸ್ಟ್ರೆ, ಇನ್ನೂ ಯಾಕೆ ನನ್ನ ಮಗ ಉದ್ಧಾರ ಆಗಿಲ್ಲ?" ಅಂತ ಕೇಳಿದರು ತಂದೆ.

"ಏನೆಂದರು ಮೇಸ್ಟ್ರು?"

"ಉದ್ಧಾರ ಆಗಲ್ಲ ಅಂದ್ರು. 'ಒಬ್ಬ ಹುಡುಗನ್ನ ಹಾಳು ಮಾಡಲು ಇಷ್ಟೆಲ್ಲಾ ಕೊಡಿಸಿದ ಮೇಲೆ ಉದ್ಧಾರ ಆಗೋ ದಾರಿಗಳೆಲ್ಲ ಬಂದ್!!' ಅಂದರು"

"ಹೌದು ಕಣಯ್ಯ! ಬಡ್ಡೀಮಕ್ಳಿಗೆ ಕೇಳಿದ್ದೆಲ್ಲ ಕೊಡಿಸಿ ತಲೆಮೇಲೆ ಇಟ್ಟಿದ್ದೆ ತಪ್ಪಾಗಿದೆ. ಎಲ್ಲಾನೂ ಕಟ್ ಮಾಡ್ಬೇಕು"

"ಬೈಕು, ಮೊಬೈಲು, ಟೀವಿ..."

"ಕಂಪ್ಯೂಟರು, ಇಂಟರ್ನೆಟ್ಟು.."

"ಸಿಡಿ ಪ್ಲೆಯರು, ಅಯ್ಪಾಡು ..."

"ಪಾಕೆಟ್ಟು ಮನಿ, ಶೂಗಳು, ಬಟ್ಟೆ, ಪರ್ಫ್ಯೂಮು..."

"ದಿಯೋದ್ರಂಟು, ಹೇರ್ ಜೆಲ್ಲು, ವಾಚು, ಬೆಲ್ಟು, ಬ್ರೇಸ್ಲೆಟ್ಟು, ಕೂಲಿಂಗ್ ಗ್ಲಾಸು, ಫೇರ್ನೆಸ್ ಕ್ರೀಮು...."
- ಹೇಳ್ತಾ ಹೇಳ್ತಾ ಹೇಳ್ತಾ ಜೀ ಮತ್ತು ಘಾ ಇಬ್ಬರ ಫ್ಯಾರನ್ ಹೀಟೂ ಏರುತ್ತ ಏರುತ್ತ ಹೋಯಿತು.

"ಸಾಕ್ ಬಿಡ್ರಿ! ನಿಮ್ಮ ಕ್ರಾಂತಿ ಮಾತುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ತಗೊಳ್ಳಿ ಕಾಫಿ ಕುಡೀರಿ" ಅಂತ ಒಳಬಂದು ಕಾಫಿ ಗ್ಲಾಸಿತ್ತರು ಶ್ರೀಮತೀಜೀ. "ಹುಡುಗರ ಹೆಸರಲ್ಲಿ ಅವನ್ನೆಲ್ಲ ತಂದು ನೀವು ಮಾಡ್ಕೊಳ್ಳೋ ಅಲಂಕಾರ ಏನು ಕಮ್ಮೀನೇ? ಟೀವಿ ಕಟ್ಮಾಡ್ತೀನಿ, ಚಾನೆಲ್ ಕಟ್ ಮಾಡ್ತೀನಿ ಅಂತೀರಲ್ಲ, ದರಿದ್ರ ಟೀವಿ ಹುಡುಗರಿಗಿಂತ ಹೆಚ್ಚು ನೋಡೋರು ಯಾರಪ್ಪ?", ಅಂತಶ್ರೀಮತಿ, ಜೀಯ ಪಕ್ಕೆ ತಿವಿದರು.

ಘಾ ಜ್ವರ ಜರ್ರನೆ ಇಳಿಯಿತು. ಕಾಫಿ ಕಪ್ಪೆತ್ತಿ ಸುರ್ ಸುರ್ ಹೀರಿದರು. ಮನಸ್ಸಿಗೆ, ದೇಹಕ್ಕೆ ಆರಾಮೆನಿಸಿತು. ಹೃದಯ ನಿರ್ಮಲವಾಯಿತು. ಕಣ್ಣಿನ ಕ್ರೋಧ ಶಾಂತಿಯಾಗಿ ಮಾರ್ಪಾಡಾಯಿತು.

"ಶ್ರೀಮತೀಜಿ ಹೇಳೋದು ಸತ್ಯ ಕಣಯ್ಯ! ಈಗ ನಿನ್ನ ಮಗು ಎಂಟೀವಿ ನೋಡುತ್ತೆ. ನೀನು ಬಯ್ದು ನ್ಯಾಷನಲ್ ನ್ಯೂಸ್ ಹಾಕಿದ್ರೆ ಅಲ್ಲಿ ಬರೋದೇನು? ಮಂತ್ರಿಯ ಕಾಮಕಾಂಡ, ಸ್ವಾಮಿಯ ಕಾಮಕಾಂಡ, ಕೋಚಿನ ಕಾಮಕಾಂಡ, ಪೋಲೀಸ್ ಕಾಮಕಾಂಡ! ಅದುಬಿಟ್ಟರೆ - ಕೊಲೆ! ಅಪ್ಪನಿಂದ ಮಗನ ಕೊಲೆ, ಗಂಡನಿಂದ ಹೆಂಡ್ತಿ ಕೊಲೆ!... ಇದನ್ನೆಲ್ಲಾ ನೋಡಿ ನೋಡಿ ನಮ್ಮ ಮಕ್ಕಳೇ ನಮ್ಮ ಕತ್ತಿಗೆ ಕತ್ತಿ ಹಿಡಿಯೋದಿಲ್ಲ ಅಂತ ಏನು ಗ್ಯಾರಂಟಿ! " ಅಂತ ಚಡಪಡಿಸಿದರು ಘಾ.

" ಹುಡುಗರ ಪ್ರಪಂಚವೇ ಅರ್ಥವಾಗದಲ್ಲ!" ಅಂತ ತಲೆ ಮೇಲೆ ಕೈಹೊತ್ತು ಕೂತರು ಜೀ.
"

1 comment:

  1. ಇ೦ದಿನ ಪರಿಸ್ಥಿತಿಗೆ ಹಿಡಿದ ಹಾಸ್ಯದ ಚೌಕಟ್ಟಿರೋ ಅದ್ಭುತ ಕೈಗನ್ನಡಿ....ಓದುವಾಗ ನಗು ಉಮ್ಮಳಿಸಿದರೂ ಒಳಗೊ೦ದು ನೋವಿನ ಮುಳ್ಳೂ ಚುಚ್ಚುತ್ತಿದೆ...

    ReplyDelete