Sunday, July 25, 2010

3. ಹನುಮದ್ವಿಕಾಸಕ್ಕೆ ಎಲ್ಲಿ ಎಲ್ಲೆ?

ಜೀಮರಿ ಮೂರ್ಖರ ಪೆಟ್ಟಿಗೆ ಹಾಕಿಕೊಂಡು ನೋಡುತ್ತಿತ್ತು. ಹುಡುಗರೋ ಹುಡುಗಿಯರೋ ತಿಳಿಯದಂತಹ ಹತ್ತಾರು ಕೈ ಕಾಲುಗಳು ಒಂದರ ಮೇಲೊಂದು ಬಿದ್ದು ಕಿತ್ತಾಡಿಕೊಂಡು ಎಳೆದಾಡುವ ದೃಶ್ಯ. ಕೀಂಕೀಂಕೀಂ ಎನ್ನುವ ಒಂದು ಶಬ್ದ ಮಾತ್ರ ಹಿನ್ನೆಲೆ ಸಂಗೀತ. ಬೇರೇನೂ ಇಲ್ಲ. "ಪಾಪ ಮಗು ಓದಿಕೊಳ್ತಿದೆ, ಇದೇನು ಶಬ್ದ!" ಅಂತ ಕಾಳಜಿಯಿಂದ ಶ್ರೀಮತೀಜೀ ಅಡುಗೆಮನೆಯಿಂದಲೂ, ಟೀವಿಯೊಳಗೆ ಯಾವ ಜೀರುಂಡೆ ನುಗ್ಗಿದೆ ಅಂತ ತಲೆಕೆಟ್ಟು ಶ್ರೀಮಾನ್-ಜಿ ಪಡಸಾಲೆಯಿಂದಲೂ ಬಂದು ನೋಡಿದರೆ......ನೋಡೋದೇನು! ಪುಸ್ತಕ ಎಸೆದು ಕೈಯಲ್ಲಿ ಚಿಪ್ಸು ಹಿಡಿದ ಜೀಮರಿ; ಎದುರಲ್ಲಿ ಟೀವಿ; ಎಳೆದಾಟ, ಉರುಳಾಟ, ಕುರುಕ್ಷೇತ್ರ!

"ನಾನಾವಾಗಲೇ ಬಡಕೊಂಡೆ. ಚಾನೆಲ್ ಛತ್ರಿ ಬೇಡಾ ಅಂತ. ಕೇಳಿದಿರಾ? ಈಗ ನೋಡಿ, ನಿಮ್ಮ ಮುದ್ದಾಣಿ ಯಾವುದೋ ಹಾಳು ಬಾಕ್ಸಿಂಗು, ಡಬ್ಲ್ಯೂ ಡಬ್ಲ್ಯೂ ಎಫ್ ಹಾಕ್ಕೊಂಡು ಕೂತಿದೆ. ಇವನನ್ನ ಸುಧಾರಿಸೋದು ನನ್ನ ಕೈಲಿ ಆಗಲ್ಲಪ್ಪ!" ಅಂತ ಶ್ರೀಮತಿಪೀಠಿಕೆ ಹಾಕಿದರು.

"ನಿಂದೊಳ್ಳೆ ಕತೆಯಾಯ್ತಲ್ಲೇ! ನೋಡ್ಕೊಂಡು ಮಾತಾಡು ಅವನೇನು ನೋಡ್ತಾ ಇದಾನೆ ಅನ್ನೋದನ್ನು! ಅದು ನ್ಯಾಷನಲ್ ನ್ಯೂಸು. ಬಾಕ್ಸಿಂಗ್ ಅಲ್ಲ. ಬಿಹಾರ ವಿಧಾನಸಭೆ ತೋರಿಸ್ತ ಇದಾರೆ" ಅಂತ ಜೀ ಎಗರಾಡಿದರು. "ನಿಮ್ಮ ಮಗ ನೋಡಿ ಹೀಗೆ.." ಅಂತ ಯಾರಾದರೂ ಪೀಠಿಕೆ ಹಾಕಿ ಉಗಿಯಲು ಶುರು ಮಾಡಿದರೆ, ಶ್ರೀಮಾನ್-ಜಿ ಅಂಥವರ ಜನ್ಮ ಜಾಲಾಡಿ ಬಿಡುತ್ತಾರೆ. ಇನ್ನು ಸ್ವಂತ ಹೆಂಡತಿಯೇ ಹರಿಹಾಯ್ದರೆ ಬಿಡ್ತಾರೆಯೇ? ಮಗನ ಪರ ವಹಿಸಿಕೊಂಡು ಆಕೆಗೆ ಮಾತಿನಿಂದ ಜಾಡಿಸಿದರು. ಜೀಮರಿಗೆ ತಲೆಕೆಟ್ಟು ಹೋಯಿತು.

"ಅಯ್ಯೋ ಸ್ವಲ್ಪ ನಿಲ್ಲಿಸ್ತೀರ? ಪ್ರೋಗ್ರಾಮಲ್ಲಿ ಅವರೇನು ಹೇಳ್ತಿದಾರೆ ಅಂತ ಗೊತ್ತಾಗೋದು ಮೊದಲೇ ಕಷ್ಟ. ಅದರ ಮಧ್ಯೆ ನಿಮ್ಮ ಉಪದ್ವ್ಯಾಪ!" ಅಂತ ಕಿರುಚಿದ.

"ಹೌದೂ.. ನೀನೀಗ ನೋಡೋದೇನು ಹೇಳು! ಬಾಕ್ಸಿಂಗಾ ಬಿಹಾರ ಅಸೆಂಬ್ಲಿನಾ? " - ಗಂಡ ಹೆಂಡತಿ ಇಬ್ಬರೂ ಒಕ್ಕೊರಲಿನಿಂದ ಕೇಳಿದರು.

"ಎರಡೂ ಅಲ್ಲ! ಇದು ಸ್ಪ್ಲಿ
ಟ್ಸ್ ವಿಲ್ಲ ! ಎಂಟೀವಿಯ ರಿಯಾಲಿಟಿ ಶೋ" ಅಂತು ಜೀಮರಿ.

"ಹಾಗಾದ್ರೆ ಬಂದ್ ಮಾಡು, ಮುಟ್ಟಾಳ!" ಅಂತ ಅಬ್ಬರಿಸುವ ಸರದಿ ಜೀಯದ್ದು, ಈಗ. ಎಂಟೀವಿ ಅಂದರೆ ಮೈಮೇಲೆ ಒಂದು ಚೇಳು ಕುಟುಕುಟು ಓಡಾಡಿದ ಅನುಭವ ಅವರಿಗೆ.

"ನೋಡಿ ನೋಡಿ, ನಾನು ಹೇಳಿಲ್ಲವಾ? ದರಿದ್ರ ಮುಂಡೇದು ನೋಡೋದು ಬೇಡಾದ್ದೇ..." ಅಂತ ಕಾವೇರಿ-ಭಾಗೀರಥಿಯರನ್ನು ಕಣ್ಣ ಕಟ್ಟೆಯಲ್ಲಿ ಆವಾಹಿಸಿಕೊಂಡು ಕುಸಿದರು ಶ್ರೀಮತೀಜೀ.

"ಏನಯ್ಯ ಅದು ಮನೆಯಲ್ಲಿ ಮಹಾಭಾರತ ನಡೀತಿದೆ! ಒಂದಿನವಾದರೂ ಮುತ್ತೈದೆಯನ್ನ ನಗಿಸಬಾರದೇನಯ್ಯ?" ಅಂತ ತಾಂಬೂಲ ಜಗಿಯುತ್ತಾ ಒಳಗೆ ಬಂದರು ಘಾ ಸಾಹೇಬರು. ಬೇಡವಾದ ಸಂದರ್ಭಗಳಲ್ಲಿ ದಿಡೀರನೆ ಪ್ರತ್ಯಕ್ಷವಾಗುವ ಅಪರೂಪದ ವರ ಅವರ ಜನ್ಮಜಾತ
ಸಿದ್ಧಿ. ಹಾಗಾಗಿ ಬಂದು ನಿಂತು, ಜೀಮರಿ - ಟೀವಿ - ಶ್ರೀಮತೀಜೀ ಯರತ್ತ ನೋಡಿ ಕೊನೆಗೆ ಶ್ರೀಮಾನ್-ಜಿಹೆಗಲ ಮೇಲೆ ಕೈ ಹಾಕಿದರು.

"ಏನಯ್ಯ ಹೇಳೋದು. ದರಿದ್ರದ್ದು ನೋಡು, ಬೇಡವಾದ್ದನ್ನೇ ನೋಡುತ್ತೆ. ಚತ್ರೀನೆ ಕಿತ್ತು ಬಿಸಾಕ್ತೀನಿ ಒಂದಿನ " ಅಂತಬೇಜಾರು ತೋಡಿಕೊಂಡರು ಜೀ.

"ಅಲ್ಲಯ್ಯ, ನಿನ್ನ ಹುಡುಗ ಎಷ್ಟೋ ವಾಸಿ. ನಮ್ಮ ಹುಡುಗನ್ನ ನೋಡು. ಕಿವಿಗೆ ಯಾವುದೋ ತಗಡು ನೇತಾಡಿಸಿಕೊಂಡು ಓಡಾಡ್ತಿದೆ. ಕತ್ತಿಗೆ ಹಾಕಿದ ಚೈನಲ್ಲಿ ಒಂದು ತಲೆ ಬುರುಡೆ! ಅವನ ಪ್ಯಾಂಟು ಸೊಂಟದಲ್ಲಿ ನಿಲ್ಲೋದಿಲ್ಲ. ತಿಕದ ಸೀಳು ಕಾಣೋ ಹಾಗೆ ತ್ರಿಶಂಕುಸ್ಥಿತಿಯಲ್ಲಿ ನೇತಾಡತದೆ. ಅವನೆದುರು ನಿಮ್ಮ ಹುಡುಗ ಎಷ್ಟೋ ವಾಸಿ ಕಣಯ್ಯಾ!" ಅಂತ ನಿಟ್ಟುಸಿರು ಬಿಟ್ಟರು ಘಾ.

"ನಾವು ಕಾಲೇಜಿಗೆ ಹೋಗ್ತಿದ್ದಾಗಿನ ಕಾಲ ನೆಪ್ಪು ಮಾಡಿಕೊ ಮಹರಾಯ! ಎಷ್ಟೊಂದು ದೈವಭಕ್ತಿ ಇಟ್ಟುಕೊಂಡು ಶೃದ್ಧೆಯಿಂದ ಹೋಗ್ತಾ ಇದ್ದಿವಿ. ಇವಕ್ಕೆ ಏನೂ ಇಲ್ಲವಲ್ಲಯ್ಯ!" ಎನ್ನುತ್ತ ಜೀ, ಮರಿ ತಲೆ ಕುಟುಕಿದರು.

"ಬಿಡಯ್ಯ . ಅವಕ್ಕೂ ಒಂದು ದಿನ ಅರ್ಥವಾಗುತ್ತೆ. ನಾವು ಹೇಳೋದೆಲ್ಲ ನೀರ ಮೇಲಿನ ಹೋಮ", ಘಾ ಹಾಗೆ ಹೇಳುತ್ತಾ ಶ್ರೀಮತೀಜೀಯನ್ನೂ ಅದುಗೆಮನೆಯನ್ನೂ ಬಹಳ ಸಾಂಕೇತಿಕವಾಗಿ ನೋಡಿದರು. "ಕಾಫಿ ಚಿಪ್ಸು ಏನಾದ್ರೂ ಬರುತ್ತೋ?" ಅನ್ನುವುದು ಸಂಕೇತದ ಗೂಡಾರ್ಥ. ಅದು ಆಕೆಗೂ ಗೊತ್ತು. ಎದ್ದು ಅಡುಗೆಮನೆಗೆ ಹೋದರು.

"ಅದೆಲ್ಲ ಬಿಡು, ಅಪ್ಪನ ಕಿಸೆಯಿಂದ ಪೈಸೆ ಕದ್ದು ಟೆಂಟಿಗೆ ಕದ್ದು ಹೋಗಿ ಹೆಲೆನನ್ನು ನೋಡ್ತಿದ್ದ ಅನುಭವ ಹೇಗಿತ್ತು ಹೇಳಯ್ಯ!" ಅಂತ ಘಾ ಜಾತಕ ಬಿಚ್ಚಿದರು. ಜೀಗೆ ಇದೆಲ್ಲ ಹೀಗೆ ಪಬ್ಲಿಕ್ಕಾಗುವುದು ಇಷ್ಟವಾಗಲಿಲ್ಲ. "ಸರಿ, ಚಾವಡಿಗೆ ಹೋಗಿ ಕೂತು ಮಾತಾಡೋಣ" ಅಂತ ಘಾರನ್ನು ಎಬ್ಬಿಸಿಕೊಂಡು (ದಬ್ಬಿಕೊಂಡು?) ಹೋದರು. ರಣರಂಗವಾಗಲಿದ್ದ ರೂಮು, ಮಳೆ ಬಂದು ನಿಂತ ಗದ್ದೆಯ ಹಾಗೆ ಮೌನವಾಗಿದ್ದು ಖುಷಿಯಾಗಿ ಜೀಮರಿ ಕಣ್ಣುಗುಡ್ಡೆಗಳನ್ನು ಹೊರಹಾಕಿಕೊಂಡು ಎಂಟೀವಿಯ ಒಳ ಹೋದ.

********************************************************************************

ಚಾವಡಿಗೆ ಬರುತ್ತಲೇ ಘಾ ಕುಸಿದರು. ಮುಖದಲ್ಲಿ ಪ್ರೇತಕಳೆ. "ಯಾಕೋ ಏನಾಯ್ತು?" ಅಂತ ಜೀ ವಿಚಾರಿಸಿದರು, ಗುಂಡಿ ಬಿಚ್ಚಿಗಾಳಿ ಹಾಕಿದರು. ಬೆಂಗಳೂರಲ್ಲಿ ಹನಿಮಳೆ ಬಿದ್ದರೆ ರಸ್ತೆಯಲ್ಲಿ ನೆರೆಯೇಳುವ ಹಾಗೆ, ಘಾ ಮುಖದಲ್ಲಿ ಬೆವರಿನ ಸೆಲೆ ಒಡೆಯಿತು.

"ಏನೂಂತ ಹೇಳಲಿ ಮಾರಾಯ! ನಿನ್ನೆಯಷ್ಟೇ ನಮ್ಮ ಹುಡುಗನ ಕಾಲೇಜಿಗೆ ಹೋಗಿ ಬಂದೆ. ಅವನ ಕಾಲೇಜಿಂದ ಒಂದು ಫೋನ್ಕಾಲ್ ಬಂದಿತ್ತು . ತುರ್ತಾಗಿ ಬಂದು ಕಾಣಿ" ಅಂತ.

"ಹೌದೇ? ಏನು ವಿಚಾರ?"

"ಹೇಳೋದೇನು? ನಮ್ಮ ಹುಡುಗ ಪರೀಕ್ಷೆಯಲ್ಲಿ ಅದ್ಭುತವಾದ ಉತ್ತರ ಬರ್ದಿದಾನೆ ಅಂತ ನನ್ನನ್ನು ಕರೆದು ಸನ್ಮಾನ ಮಾಡಿದರು"

"ಬಿಡಿಸಿ ಹೇಳಯ್ಯ!"

"ಅವನು ಗಣಿತ ಪೇಪರಲ್ಲಿ ದೊಡ್ಡದಾಗಿ ಬರ್ದಿದಾನೆ: ಇದು ನನ್ನ ಜೀವನದ ಪ್ರಶ್ನೆ. ಉತ್ತರ ಬರೆಯಲೇಬೇಕಾದ ತುರ್ತು. ಆದರೆ ನಾನು ಓದಿದ್ದು ಬಿಟ್ಟು ಉಳಿದೆಲ್ಲಾ ಮೂಲೆಯಿಂದ ಪ್ರಶ್ನೆ ಕೇಳಿ ನನ್ನ ಕೈ ಕಟ್ಟಿ ಹಾಕ್ಬಿಟ್ಟಿದೀರಿ! ಹಾಗಾಗಿ, ನಿಮ್ಮ ತಪ್ಪಿಗೆ ನೀವೇಪ್ರಾಯಶ್ಚಿತ್ತ ಮಾಡಬೇಕು. ಖಾಲಿ ಹಾಳೆಗೆ ಭರ್ತಿ ಮಾರ್ಕು ಹಾಕಿ ನನ್ನನ್ನು ದಡ ಮುಟ್ಟಿಸಬೇಕು. ತಪ್ಪಿದರೆ, ಕಾಲೇಜು ಹೊರಗೆ ಗ್ಯಾಂಗ್ ಕಟ್ಟಿಕೊಂಡು ನಿಮ್ಮ ವಿಚಾರಣೆ ಮಾಡಬೇಕಾಗುತ್ತೆ. ಎಚ್ಚರ!, ಅಂತ ಬರ್ದಿದಾನಲ್ಲಯ್ಯ!"

ಅಪ್ಪನಿಗೆ ತಕ್ಕ ಮಗ ಅನ್ನಿಸಿತು ಜೀಗೆ. ಆದರೆ ಹೇಳಕ್ಕಾಗುತ್ಯೆ? ಒಂದು ಸಂತಾಪ ಸೂಚಕ ಅಭಿನಯ ಮಾಡಿದರು.

"ಪೇಪರು ಪ್ರಿನ್ಸಿಪಾಲ್ ವರೆಗೂ ಹೋಯ್ತಂತೆ. ಅವರು ಇವನನ್ನ ಕರೆದು ಸರಿಯಾದ ವಿಚಾರಣೆ ಮಾಡಿದರಂತೆ. ಅಪ್ಪನ್ನ ಕರ್ಕೊಂಬಾ ಅಂದರಂತೆ. ಇಂವಾ, "ಅಪ್ಪನನ್ನು ಯಾಕೆ ಕರ್ಕಂಬರ್ಲಿ. ತಪ್ಪು ಮಾಡಿದ್ದು ನಾನು. ನನಗೆ ಶಿಕ್ಷೆ ಕೊಡಿ" ಅಂದನಂತೆ. ಅದಕ್ಕವರು ಇದು ನಿನ್ನ ತಪ್ಪಲ್ಲಪ್ಪ, ನಿನ್ನನ್ನ ಹುಟ್ಟಿಸಿದವರ ತಪ್ಪು" ಅಂದರಂತೆ ಕಣಯ್ಯಾ!" ಅಂತ ಗಳಗಳ ಅಳಹತ್ತಿದರು ಘಾ.

"ಹಾಕು ಒಂದು ಮಾನನಷ್ಟ ಮೊಕದ್ದಮೆ!" ಅಂತ ಜೀಯ ಪುಕ್ಕಟೆ ಸಲಹೆ.

"ಆದರೆ ತಪ್ಪು ನನ್ನಲ್ಲೇ ಇದೆಯಲ್ಲಯ್ಯ! ಬಡ್ಡೀಮಗ ಏನಂದ ಗೊತ್ತ? ನನ್ನ ಅಪ್ಪ ತೀರ್ಕೊಂಡು ಎರಡು ವರ್ಷ ಆಗಿದೆ. ಇರೋದು ಅಮ್ಮ ಒಬ್ಬರೇ. ಅವರೂ ಹಾರ್ಟ್ ಪೇಷಂಟು. ಅದೂ ಇದೂ ಅಂತ ವುವುಜೆಲ ಊದಿದ್ದಾನೆ. ಇವನ ಕರುಣಾಜನಕ ಕತೆಗೆ ಅವರೂ ಕರಗಿ ನೀರಾಗಿ "ಸರಿ, ಹಾಗಾದರೆ ಅಮ್ಮನ್ನೇ ಕರ್ಕೊಂಬಾ" ಅಂದರಂತೆ.

"ಪರ್ವಾಗಿಲ್ವೆ! ನಿನ್ನ ಮಗನ ಪಿತೃಭಕ್ತಿ ಮೆಚ್ಚಬೇಕಾದ್ದೆ ಕಣಯ್ಯಾ. ನಿನಗೆ ತಿಳಿಯಬಾರದು ಅಂತ ಎಷ್ಟು ಕಾಳಜಿ ವಹಿಸಿದಾನೆ ನೋಡು!"

"ಕಾಳಜಿ ಏನು ಮಣ್ಣು! ಬೋಳೀಮಗ, ಅಮ್ಮ ಅಂತ ಹೇಳ್ಕೊಂಡು ಯಾವ್ದೋ ಹಾಳು ಹೆಂಗಸನ್ನ ಬುಕ್ ಮಾಡ್ಕೊಂಡು ಕರಕೊಂಡು ಹೋದನಂತೆ. ಪ್ರಿನ್ಸಿಪಾಲು ಸಿಕ್ಕಿದ್ದೇ ಸೀಕರಣೆ ಅಂತ ಯಮ್ಮನನ್ನು ಎದುರು ಕೂರಿಸಿಕೊಂಡು ಇವನಿಗೆ ಅರ್ಚನೆ ಮಾಡಿದರಂತೆ. ಯಮ್ಮನೂ ತಲೆಕೆಟ್ಟು ಇವನ ಕಪಾಳಕ್ಕೆ ಎರಡು ಬಾರಿಸಿದಳಂತೆ. ಆಮೇಲೆ ಪ್ರಿನ್ಸಿಪಾಲಿಗೆ ಭಯವಾಗಿ "ಸರಿ, ಇಲ್ಲಿಗೆ ವಿಷಯ ನಿಲ್ಸೋಣ. ದಯವಿಟ್ಟು ಹೊಡೆದಾಟ ಮಾಡಬೇಡಿ" ಅಂತ ಬೇಡಿಕೊಂಡು ಅವಳನ್ನ ಕಳಿಸಿಕೊಟ್ಟರಂತೆ."

"ಮುಗೀತಲ್ಲ ಪ್ರಕರಣ, ಮತ್ತೆ ನೀನ್ಯಾಕೆ ಹೋದೆಯಪ್ಪ!"

" ಪ್ರಿನ್ಸಿಪಾಲು ಮೊದಲೇ ಬಯಾಲಜಿ ಪ್ರೊಫೆಸರು. ಅವಳಿಗೂ ಇವನಿಗೂ ಬಯಲಾಜಿಕಾಲ್ ಸಿಮಿಲಾರಿಟಿ ಇಲ್ಲವಲ್ಲ ಅಂತ ಅವರಿಗೆ ಡೌಟು ಬಂದು ಸ್ವಲ್ಪ ಸಂಶೋಧನೆ ಮಾಡಿದರಂತೆ. ಆಮೇಲೆ ಗೊತ್ತಾಯ್ತು - ಯಮ್ಮ ಇವನ ಅಮ್ಮ ಅಲ್ಲ, ಕಾಲೇಜಿನ ಎದುರಿನ ಸಿಗರೇಟ್ ಅಂಗಡಿ ಸುಬ್ಬಮ್ಮ ಅಂತ.."

"ಅಂತೂ ನಿನ್ನ ಮಗನ ಪ್ಲಾನೆಲ್ಲ ಟುಸ್ ಆಯ್ತು ಅನ್ನು!"

"ಆಗೋದೇನು. ಅವನ ಭೂತ ಬಿಡಿಸಿ ಮನೇಲಿ ಹಾಕಿದ್ದೇನೆ. ಅದಕ್ಕೆ ಸುಸ್ತು ಕಣಯ್ಯಾ!" ಅಂತ ಮತ್ತೆ ಬೆವರೊರೆಸಿಕೊಂಡರು ಘಾ. "ನಮ್ಮ ಕಾಲಾನೇ ವಾಸಿ. ನನ್ ಮಕ್ಳಿಗೆ ಅಪ್ಪ ಅಮ್ಮನ ಮೇಲೂ ಪ್ರೀತಿ ವಿಶ್ವಾಸ ಇಲ್ಲವಲ್ಲ!" ಅಂತ ಘಾಗೆ ಬೇಜಾರು, ಬುಳುಬುಳು ದುಕ್ಕ.

"ನಮ್ಮ ಹುಡುಗನ ಮಾರ್ಕ್-ಕಾರ್ಡಿನ ತುಂಬಾ ಉದ್ದುದ್ದ ಕೆಂಪು ಗೀಟು ಬಿದ್ದ ಮೇಲೆ ನಾನೂ ಅವನ ಸ್ಕೂಲಿಗೆ ಹೋಗಿದ್ದೆ. ಅಲ್ಲಿ ನನ್ನಹಾಗೆಯೇ ದುಖಪೂರಿತ ತಂದೆಯೊಬ್ಬರು ಬಂದಿದ್ದರು. ಅವರು ಹೆಡ್ ಮಾಸ್ಟರ್ ಹತ್ತಿರ ಏನು ಹೇಳಿದರು ಗೊತ್ತ?" ಅಂತ ಜೀ ತನ್ನ ರೀಲು ಬಿಚ್ಚಕ್ಕೆ ಶುರುಮಾಡಿದರು.

"ಏನು??", ಘಾ ಕಣ್ಣು ಊರಗಲವಾಯಿತು. ತನ್ನ ಹಾಗೆಯೇ ಜೀಯೂ ಸಮದುಖಿಯೇ? - ಅಂತ ಘಾ ಸಾಹೇಬರಿಗೆ ಆಸೆ ಮತ್ತು ಆತಂಕ.

"ಹೆಡ್ ಮೇಸ್ಟ್ರೆ, ನಮ್ ಹುಡುಗನಿಗೆ ಶಬ್ದ, ಕಿರಿಕಿರಿ, ತೊಂದ್ರೆ ಆಗಬಾರದು ಅಂತ ಪ್ರತ್ಯೇಕ ರೂಂ ಮಾಡಿದೆ. ಬೇಕುಬೇಕಾದ ಪುಸ್ತಕತರಿಸಿದೆ. ಬೇಕು ಅಂದ ಸಿಡಿ ಎಲ್ಲ ತಂದು ಕೊಟ್ಟೆ. ಟಾಟಾ ಸ್ಕೈ ಯಲ್ಲಿ ಅದೇನೋ "ಆಕ್ಟಿವ್ ಸ್ಟಡಿ" ಅಂತ ಬರುತ್ತಂತೆ. ಅದಕ್ಕೇ ಅಂತ ಒಂದು ಪ್ಲಾಸ್ಮಾ ಟೀವಿ ಅವನ ರೂಮಲ್ಲಿ ಹಾಕಿ ಟಾಟಾ ಕನೆಕ್ಷನ್ ಕೊಡಿಸಿದೆ. ಎಜುಕೆಶನ್ನಿಗೆ ಬೇಕಾದ ಡಿವಿಡಿ ಎಲ್ಲ ಎನ್ಸೀಯಾರ್ಟಿಯಿಂದ ತರಿಸಿದೆ. ಡಿವಿಡಿ ಪ್ಲೇಯರ್ ಫಿಕ್ಸ್ ಮಾಡಿದೆ. ಬೇಕುಬೇಕಾದ ಮಾಹಿತಿಯೆಲ್ಲ ಕೈಯಳೆತೆಗೆ ಸಿಗಬೇಕು ಅಂತಒಂದು ಕಂಪ್ಯೂಟರೂ ಇಂಟರ್ನೆಟ್ ಕನೆಕ್ಷನ್ನೂ ಕೊಡಿಸಿದೆ. ಹೇಳಿ ಮೇಸ್ಟ್ರೆ, ಇನ್ನೂ ಯಾಕೆ ನನ್ನ ಮಗ ಉದ್ಧಾರ ಆಗಿಲ್ಲ?" ಅಂತ ಕೇಳಿದರು ತಂದೆ.

"ಏನೆಂದರು ಮೇಸ್ಟ್ರು?"

"ಉದ್ಧಾರ ಆಗಲ್ಲ ಅಂದ್ರು. 'ಒಬ್ಬ ಹುಡುಗನ್ನ ಹಾಳು ಮಾಡಲು ಇಷ್ಟೆಲ್ಲಾ ಕೊಡಿಸಿದ ಮೇಲೆ ಉದ್ಧಾರ ಆಗೋ ದಾರಿಗಳೆಲ್ಲ ಬಂದ್!!' ಅಂದರು"

"ಹೌದು ಕಣಯ್ಯ! ಬಡ್ಡೀಮಕ್ಳಿಗೆ ಕೇಳಿದ್ದೆಲ್ಲ ಕೊಡಿಸಿ ತಲೆಮೇಲೆ ಇಟ್ಟಿದ್ದೆ ತಪ್ಪಾಗಿದೆ. ಎಲ್ಲಾನೂ ಕಟ್ ಮಾಡ್ಬೇಕು"

"ಬೈಕು, ಮೊಬೈಲು, ಟೀವಿ..."

"ಕಂಪ್ಯೂಟರು, ಇಂಟರ್ನೆಟ್ಟು.."

"ಸಿಡಿ ಪ್ಲೆಯರು, ಅಯ್ಪಾಡು ..."

"ಪಾಕೆಟ್ಟು ಮನಿ, ಶೂಗಳು, ಬಟ್ಟೆ, ಪರ್ಫ್ಯೂಮು..."

"ದಿಯೋದ್ರಂಟು, ಹೇರ್ ಜೆಲ್ಲು, ವಾಚು, ಬೆಲ್ಟು, ಬ್ರೇಸ್ಲೆಟ್ಟು, ಕೂಲಿಂಗ್ ಗ್ಲಾಸು, ಫೇರ್ನೆಸ್ ಕ್ರೀಮು...."
- ಹೇಳ್ತಾ ಹೇಳ್ತಾ ಹೇಳ್ತಾ ಜೀ ಮತ್ತು ಘಾ ಇಬ್ಬರ ಫ್ಯಾರನ್ ಹೀಟೂ ಏರುತ್ತ ಏರುತ್ತ ಹೋಯಿತು.

"ಸಾಕ್ ಬಿಡ್ರಿ! ನಿಮ್ಮ ಕ್ರಾಂತಿ ಮಾತುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ತಗೊಳ್ಳಿ ಕಾಫಿ ಕುಡೀರಿ" ಅಂತ ಒಳಬಂದು ಕಾಫಿ ಗ್ಲಾಸಿತ್ತರು ಶ್ರೀಮತೀಜೀ. "ಹುಡುಗರ ಹೆಸರಲ್ಲಿ ಅವನ್ನೆಲ್ಲ ತಂದು ನೀವು ಮಾಡ್ಕೊಳ್ಳೋ ಅಲಂಕಾರ ಏನು ಕಮ್ಮೀನೇ? ಟೀವಿ ಕಟ್ಮಾಡ್ತೀನಿ, ಚಾನೆಲ್ ಕಟ್ ಮಾಡ್ತೀನಿ ಅಂತೀರಲ್ಲ, ದರಿದ್ರ ಟೀವಿ ಹುಡುಗರಿಗಿಂತ ಹೆಚ್ಚು ನೋಡೋರು ಯಾರಪ್ಪ?", ಅಂತಶ್ರೀಮತಿ, ಜೀಯ ಪಕ್ಕೆ ತಿವಿದರು.

ಘಾ ಜ್ವರ ಜರ್ರನೆ ಇಳಿಯಿತು. ಕಾಫಿ ಕಪ್ಪೆತ್ತಿ ಸುರ್ ಸುರ್ ಹೀರಿದರು. ಮನಸ್ಸಿಗೆ, ದೇಹಕ್ಕೆ ಆರಾಮೆನಿಸಿತು. ಹೃದಯ ನಿರ್ಮಲವಾಯಿತು. ಕಣ್ಣಿನ ಕ್ರೋಧ ಶಾಂತಿಯಾಗಿ ಮಾರ್ಪಾಡಾಯಿತು.

"ಶ್ರೀಮತೀಜಿ ಹೇಳೋದು ಸತ್ಯ ಕಣಯ್ಯ! ಈಗ ನಿನ್ನ ಮಗು ಎಂಟೀವಿ ನೋಡುತ್ತೆ. ನೀನು ಬಯ್ದು ನ್ಯಾಷನಲ್ ನ್ಯೂಸ್ ಹಾಕಿದ್ರೆ ಅಲ್ಲಿ ಬರೋದೇನು? ಮಂತ್ರಿಯ ಕಾಮಕಾಂಡ, ಸ್ವಾಮಿಯ ಕಾಮಕಾಂಡ, ಕೋಚಿನ ಕಾಮಕಾಂಡ, ಪೋಲೀಸ್ ಕಾಮಕಾಂಡ! ಅದುಬಿಟ್ಟರೆ - ಕೊಲೆ! ಅಪ್ಪನಿಂದ ಮಗನ ಕೊಲೆ, ಗಂಡನಿಂದ ಹೆಂಡ್ತಿ ಕೊಲೆ!... ಇದನ್ನೆಲ್ಲಾ ನೋಡಿ ನೋಡಿ ನಮ್ಮ ಮಕ್ಕಳೇ ನಮ್ಮ ಕತ್ತಿಗೆ ಕತ್ತಿ ಹಿಡಿಯೋದಿಲ್ಲ ಅಂತ ಏನು ಗ್ಯಾರಂಟಿ! " ಅಂತ ಚಡಪಡಿಸಿದರು ಘಾ.

" ಹುಡುಗರ ಪ್ರಪಂಚವೇ ಅರ್ಥವಾಗದಲ್ಲ!" ಅಂತ ತಲೆ ಮೇಲೆ ಕೈಹೊತ್ತು ಕೂತರು ಜೀ.
"

Thursday, July 22, 2010

೨. ಜೀ, ಘಾ ಮತ್ತು ಉಪ್ಪಿಟ್ಟು

ಶ್ರೀಮಾನ್ ಜಿ ಗೊತ್ತಲ್ಲ?

ಅದೇ ಸ್ವಾಮಿ, ನಾಯ್ನ್ಟೀನ್ ಸೆವೆನ್ಟಿಯಲ್ಲಿ ಮದುವೆಗೆ ಹೊಲಿಸಿದ ಕೋಟು ಹಾಕ್ಕೊಂಡು, ಅದರೊಳಗೆ ತೂರಲಾರದ ಹೊಟ್ಟೆಯನ್ನು, ಹಾವಿನ ಉದ್ದಕ್ಕೆ ಹೊಟ್ಟೆ ಇಳಿಸಿಕೊಳ್ಳಲು ಪರದಾಡುವ ಗಣಪನ ಹಾಗೆ, ಇರುಕಿಸಿಕೊಂಡು, ನಕ್ಷತ್ರ ಕಾಣುವ ಛತ್ರಿ ಹಿಡಿದು ಬೆಳಿಗ್ಗೆ- ಮಧ್ಯಾಹ್ನ - ಸಂಜೆ ಗಾಂಧೀ ಬಜಾರಿಗೆ ವಾಕಿಂಗ್
ಹೋಗಿ, ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಮೆದ್ದು, ಸಿಗುವ ಓರಗೆಯ ಗೆಳೆಯರ ಹತ್ತಿರ ಅಮಿತಾಬ್ ಬಚ್ಚನ್ ಮಾಡಿದ ಹಳೇ ಸಿನಿಮಾಗಳ ಬಗ್ಗೆ ಮಾತಾಡಿ, ಮನೆಗೆ ಬಂದು ಕಾಫಿ ಕುಡಿದು.... ಅಂದರೆನಿಮಗೆ ಗೊತ್ತಾಗಿರಬೇಕು!

ಇವರ ಯಾರೋ ಮುತ್ತಾತ ಮೊಘಲರ ಆಸ್ಥಾನದಲ್ಲಿ ವಿದ್ವಾನ್ ಆಗಿದ್ರಂತೆ. ಇನ್ನೂ ಸ್ಪಷ್ಟವಾಗಿ ಹೇಳಬೇಕಂದ್ರೆ, ತುಘಲಕ್ ಮಹಾರಾಜರ ಆಸ್ಥಾನದಲ್ಲಿ ಇವರ ಪಿಜ್ಜನ ಅಜ್ಜ ಮಹಾ ಮಾಂದಲೀಕರಾಗಿದ್ದರಂತೆ. ಅವರ ಕೆಲಸ ಏನು ಅಂದರೆ: ಮಹಾರಾಜರು ಹೋದ ಕಡೆ ಗಾಳಿ ಬೀಸುವುದು, ಹೇಳಿದ್ದನ್ನು ಶಿರಸಾ ವಹಿಸಿ ಕೇಳಿಕೊಂಡು ಸಿಕ್ಕವರ ತಲೆ ತೆಗೆಯುವುದು, ರಾಜರಿಗಾಗದವರ ಕಾಲೆಳೆಯುವುದು, ವೈರಿಗಳ ಮಾತುಕತೆ ಕದ್ದಾಲಿಸುವುದು - ಹೀಗೆ.. ಎಲ್ಲ ರಾಜತಾಂತ್ರಿಕ ಕೆಲಸಗಳನ್ನು ಬಹಳ ಎಚ್ಚರದಿಂದ ಮಾಡಿ ಸಕಲ ಗೌರವಾದರ ಪಡೆದಿದ್ದರು.

ತುಘ್ಲಕ್ ದಿಲ್ಲಿ ಬಿಟ್ಟು ಹೋದಾಗ ಹೇಳಿದನಂತೆ : "ಏನ್ರೀ ಮಂತ್ರಿಗಳೇ, ದಿಲ್ಲಿ ಸರಿಯಿಲ್ಲ. ದೌಲತಾಬಾದಿಗೆ ಹೋಗೋಣ. ಏನಂತೀರಿ?"

ಇವರು: "ಹಾನ್ಜೀ"

ತುಘಲಕ್ : " ಇಲ್ಲಿ ಯಾರ್ಗೂ ಬುದ್ಧಿ ಇಲ್ಲ. ಏನೇ ಹೇಳ್ರೀ, ನನ್ನ ಮಾತನ್ನ, ಮನಸನ್ನ ಅರ್ಥ ಮಾಡಿಕೊಂಡವರು ನೀವೊಬ್ಬರೇ"

ಇವರು: "ಹಾನ್ಜೀ"

ಹೀಗೆ ಆಗಿ, ರಾಜರು ದೌಲತಾಬಾದಿಗೆ ಹೋಗಿ ಅಲ್ಲಿ ಸರಿಬರದೆ ವಾಪಸು ಹೊರಟಾಗ ಹೇಳಿದರಂತೆ: "ಏನೇ ಹೇಳ್ರೀ, ದೌಲತಾಬಾದು ಸರಿಯಿಲ್ಲ. ದಿಲ್ಲಿನೆ ವಾಸಿ. ವಾಪಸ್ ಹೋಗೋಣ, ಏನಂತೀರಿ?"

ಇವರು: "ಹಾನ್ಜೀ"

ತುಘಲಕ್: "ಇಲ್ಲಿ ಯಾರ್ಗೂ ಬುದ್ಧಿ ಇಲ್ಲ. ನನ್ನನ್ನು ಹುಚ್ಚ ಅಂತಾರೆ. ನೀವೊಬ್ಬರೇ ಕಾಣ್ರೀ, ನನ್ನ ಮಾತನ್ನ, ಮನಸನ್ನ...."

ಇವರು: "ಹಾನ್ಜೀ"

- ಹೀಗೆ, ರಾಜಮಹಾರಾಜರು ಅವರವರ ಅಂತರಂಗದ ಮಾತುಗಳನ್ನು ಹಂಚಿಕೊಳ್ಳುವಷ್ಟು ಶ್ರೀಮಾನ್-ಜಿ ಗಳ ಮುತ್ತಾತ ಬೆಳೆದಿದ್ದರು. ಜೀ ಜೀ ಅನ್ನುತ್ತಲೇ ದೊಡ್ಡ ದೊಡ್ಡ ರಾಜವಂಶಗಳನ್ನು ನಿರ್ವಂಶ ಮಾಡಿ ಹೆಸರುವಾಸಿಯಾದರು. ಇನ್ನು ಅವರ ಮಕ್ಕಳೆಲ್ಲ ಸ್ವತಂತ್ರ ಭಾರತದ ಕಾಂಗ್ರೆಸ್ ಸರಕಾರಗಳಲ್ಲಿ ಕಾಲಕಾಲಕ್ಕೆ ಹಾನ್ಜೀ ಮಂತ್ರಿ - ಹೂನ್ಜೀ ಮಂತ್ರಿಗಳಾಗಿ ದೊಡ್ಡ ದೊಡ್ಡ ಹೆಸರು ಮಾಡಿದರು. ಆದರೆ, ಮನುಶ್ಯನಿಗೆಕೋ ಗ್ರಹಚಾರ ಅಷ್ಟೊಂದು ಕೈ ಹಿಡಿಯದೆ ರಾಜಕೀಯ ಪ್ರವೇಶ ಸಾಧ್ಯವಾಗಲಿಲ್ಲ. ಸತ್ಯ, ನಿಷ್ಠೆ, ಪ್ರಾಮಾಣಿಕತೆ ಅಂತ ಕೆಲವು ಕೆಲಸಕ್ಕೆ ಬಾರದ ಗುಣಗಳು ಬೆಳೆದದ್ದರಿಂದ ರಾಜಕೀಯ ಬೆಳವಣಿಗೆ ಕುಗ್ಗಿ, ಶ್ರೀಮಾನ್-ಜಿ, ಭಾರತ ಗಣತಂತ್ರದ ಒಬ್ಬ ನಿಷ್ಪಾಪಿ ನಿಷ್ಪ್ರಯೋಜಕ ನಾಗರಿಕನಾಗಿ ಬಿಟ್ಟರು. ಆದರೂ, ಜೀ ಜೀ ವಂಶದ ಕುಡಿಯಲ್ಲವೇ, ಹಾಗಾಗಿ ಜೀ ಅಂತ ಇವರ ಸಾಮಾನ್ಯ ಹೆಸರಿಗೂ ಒಂದು ಬಾಲ ಸೇರ್ಕೊಂಡುಬಿಟ್ಟಿದೆ.

ಶ್ರೀಮಾನ್-ಜಿ ಅವರ ಬೆಳಗ್ಗಿನ ಬ್ರೇಕ್ ಫಾಸ್ಟು : ಸಜ್ಜಿಗೆ ಬಜಿಲ್. ಅರ್ಥಾತ್ ನಾವೆಲ್ಲಾ ಪ್ರೀತಿಯಿಂದ ಕರೆಯುವ ಉಪ್ಮಾ ಅವಲಕ್ಕಿ!
ಉಪ್ಮಾ ಯಾಕೆಂದರೆ, ಅದು ಬಹಳ ಪುರಾತನ ತಿಂಡಿ ಅಂತ ಜೀಗಳ ನಂಬಿಕೆ. ಅದಕ್ಕೆ ಆಧಾರವೂ ಇದೆ ಅನ್ನಿ! "ಉಪಮಾ ಕಾಳಿದಾಸಸ್ಯ" ಅಂತ ಹೇಳಿಲ್ಲವೇ? ಅಂದರೆ, ಕಾಳಿದಾಸನ ಕಾಲದಲ್ಲೇ ಇದು ಬಹಳ ಹೆಸರು ಪಡೆದಿತ್ತು. ಕಾಳಿದಾಸನ ಉಪ್ಪಿಟ್ಟೂ ಅಂದ್ರೆ ಉಪ್ಪಿಟ್ಟು ಅಂತ ಮೌರ್ಯ ವಂಶದ ರಾಜರುಗಳೇ ಹಾಡಿ ಹೊಗಳ್ತಾ ಇದ್ದರು ಎನ್ನುವುದು ಜೀಗಳ ಪಿ ಹೆಚ್ ಡಿ ಸಂಶೋಧನೆ.

ಇನ್ನೊಂದು ಕಾರಣ ಏನೆಂದರೆ, ಅದಕ್ಕೂ ಉಡುಪಿಗೂ ಇರುವ ನಂಟು. ಉಡುಪಿಯವರು ನೋಡಿ, ಯಾವುದೊ ಕಾಲದಲ್ಲಿ ಊರುಬಿಟ್ಟು ಘಟ್ಟ ಹತ್ತಿ ಹೋದಲ್ಲೆಲ್ಲ ಹೋಟೆಲು ತೆರೆದು ಉಪ್ಪಿಟ್ಟು-ಅವಲಕ್ಕಿ ಮಾರಿದರು. ನೀಲ್ ಆರ್ಮಸ್ಟ್ರಾಂಗ್ ಅಂತ ಒಬ್ಬರು ಪುಣ್ಯಾತ್ಮ ಚಂದ್ರನಲ್ಲಿ ಹೋಗಿ ಇಳಿದು ಹಸಿದುಕೊಂಡು ಕೂತಿದ್ದಾಗ, "ನಿಮಗೆ ಸಜ್ಜಿಗೆ ಬೇಕೋ ಬಜಿಲ್ ಬೇಕೋ?" ಅಂತ ವಿಚಾರಿಸಿಕೊಂಡವರು ಉಡುಪಿ ಭಟ್ರುಗಳೇ ಅಂತೆ. ಜೀಗಳಿಗೂ ಪಾಪ, ಇಂಥವರ ಮೇಲೆ ವಿಪರೀತ ಪ್ರೀತಿ, ವ್ಯಾಮೋಹ. ಹಾಗಾಗಿ, ಅವರ ಗೌರವಾರ್ಥವಾಗಿ ಇವರು ಎರಡು ತಿಂಡಿಗಳನ್ನು ಬೆಳಗಿನ ಉಪಾಹಾರದ ತಟ್ಟೆಗೆ ಆಯ್ಕೆ ಮಾಡ್ಕೊಂಡಿದಾರೆ. ಅಲ್ಲದೆ ಇವರ ಗುರುಗಳು ಎಚ್ಚೆನ್ ಬೇರೆ, ಯಾವಾಗಲೂ ಹೇಳ್ತಿದ್ದರಂತೆ: "ನಾನು ಅಮೆರಿಕೆಯಲ್ಲಿ ನಾಲ್ಕು ವರ್ಷ ಡಾಕ್ಟರೇಟ್ ಮಾಡ್ತಿದ್ದಾಗ, ನಿಷ್ಠೆಯಿಂದ ದಿನವೂ ಮಾಡ್ತಿದ್ದದ್ದು ಎರಡೇ ಕಣಯ್ಯಾ: ಸಂಶೋಧನೆ ಮತ್ತು ಉಪ್ಪಿಟ್ಟು!" ಅಂತ.

ಇನ್ನು ಯಾರಿಗೂ ಗೊತ್ತಿಲ್ಲದ ಗುಟ್ಟಿನ ಸಂಗತಿ ಏನೆಂದರೆ: ಅವರ ತಟ್ಟೆಗೆ ಎರಡು ಐಟಂಗಳು ಬಂದಿರುವುದು ಅವರಿಗೆ ಇದರ ಮೇಲೆ ಪ್ರೀತಿ ಅಂತಲ್ಲ. ಹೆಸರಿನ ಮೇಲಿನ ಅಭಿಮಾನದಿಂದ ಅಂತ. ಅರ್ಥ ಆಗಿಲ್ವೆ? "ಸಜ್ಜಿಗೆ ಬಜಿಲ್" - ಎರಡು ಶಬ್ದಗಳಲ್ಲಿ ಒತ್ತಕ್ಷರವೂ ಸೇರಿ ಮೂರು ಸಲ "ಜೀ" ಬಂತು. ಅಂದ ಮೇಲೆ, ಅದು ಶ್ರೀಮಾನ್-ಜೀಗಳ ಹಿಟ್ ಲಿಸ್ಟಿನಲ್ಲಿ ಸೇರದಿರಲು ಹೇಗೆ ಸಾಧ್ಯ!

ಜೀಗಳ ಗಳಸ್ಯ ಕಂಠಸ್ಯ ಗೆಳೆಯ ಘಾ ಅಪ್ಪಿತಪ್ಪಿಯೂ ಜೀ ಮನೆಗೆ ಬೆಳಗ್ಗೆ ಹೋಗುವುದಿಲ್ಲ. ಹಾಗೇನಾದರೂ ಜೀ ಮನೆ ಮುಂದೆ ಹಾದುಹೊಗಬೇಕಾಗಿ ಬಂದರೆ ತಲೆತಪ್ಪಿಸಿಕೊಂಡು, ಬಳಸು ದಾರಿಯಲ್ಲಿ ಕಾಲೆಳೆದುಕೊಂಡು ಪರಾರಿಯಾಗುತ್ತಾರೆ. ಕಾರಣ ಇಷ್ಟೇ: ಅವರಿಗೂ ಉಪ್ಪಿಟ್ಟಿಗೂ - ಯಡ್ಡಿ ಸಿದ್ದು ಇದ್ದ ಹಾಗೆ. "ಏನಯ್ಯ ಬೆಳಬೆಳಗ್ಗೆಕಾಂಕ್ರೀಟು ಮುಕ್ತೀಯ! ಅದೂ ಒಂದು ತಿಂಡಿಯೇ?" ಅಂತ ಉಡಾಫೆ ಹೊಡೆಯುತ್ತಾರೆ ಅವರು. ಅವರು ಉಪ್ಪಿಟ್ಟು ತಿಂದರೆ, ಅದು ಗಂಟಲು - ಜಠರ - ಕರುಳುಗಳಲ್ಲಿ ಗಾರೆಯಂತೆ ಅಂಟಿಕೊಂಡು ದಿನವಿಡೀ ಪಡಬಾರದ ವೇದನೆ ಕೊಡುತ್ತಂತೆ. ಅದೂ ಅಲ್ಲದೆ ಅವರು ತರುಣರಾಗಿದ್ದಾಗ ಹೆಣ್ಣು ನೋಡಲು ಹೋದ ಕಡೆಯಲ್ಲೆಲ್ಲ್ಲ ಉಪ್ಪಿಟ್ಟು ತಿಂದೂ ತಿಂದೂವರ ರುಚಿಗ್ರಂಥಿಗಳೇ ಕೆಟ್ಟು ಹೋಗಿದ್ದವಂತೆ. ಮದುವೆಯಾದ ಮೇಲೆ ಹೆಂಡತಿ ಮೊತ್ತಮೊದಲ ಬಾರಿಗೆ ಅಡುಗೆ ಮನೆಗೆ ಹೋಗಿ ಮಾಡಿದ ತಿಂಡಿ ಯಾವುದು? - ಉಪ್ಪಿಟ್ಟು!! ಅವತ್ತಿನಿಂದ ಘಾ ಸಾಹೇಬರಿಗೆ ಹೆಂಡತಿಯನ್ನು ನೋಡಿದರೂ ಅಷ್ಟಕ್ಕಷ್ಟೆ.

ಶ್ರೀಮಾನ್-ಜೀ ಒಂದು ಸಲ ಘಾ ಜೊತೆ ಏನೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರಂತೆ, ಇಪ್ಪತ್ತು ವರ್ಷದ ಹಿಂದೆ. ಹಾಗೇ ಬಂದವರು ಲಾಲ್-ಬಾಗಿಗೂ ಒಂದು ಸುತ್ತು ಹೊಡೆದು ಸುಸ್ತಾಗಿ ಮಾವಳ್ಳಿ ಟಿಫಿನ್ ರೂಂ ನುಗ್ಗಿದರು. ಅರ್ಧ ದಿನ ಕಾದ ಮೇಲೆ ಒಳಗೆಹೋಗಿ ಕೂರಲು ಟೇಬಲು ಸಿಕ್ಕಿತು. "ಏನು ಬೇಕು?" ಅಂತ ಕೇಳಿದ ಸರ್ವರಿಗೆ "ಉಪ್ಪಿಟ್ಟು" ಅಂತ ಹೇಳಲು ಹೋಗಿ ಬಾಯಿತೆರೆದಿದ್ದ ಜೀಯವರ ಬಾಯಿಯನ್ನು ರಪ್ಪನೆ ಮುಚ್ಚಿ, " ದರಿದ್ರಾನ ಇಲ್ಲಾದರೂ ಬಿಡಯ್ಯ! ನಾನು ಆರ್ಡರ್ ಮಾಡ್ತೀನಿ ತಾಳು. ಅದನ್ನೇ ನೀನೂ ತಿನ್ನಬೇಕು" ಅಂತ ತಾಕೀತು ಮಾಡಿ, ಘಾ, ಸರ್ವರತ್ತ ತಿರುಗಿ ಕೇಳಿದರು: "ಏನಯ್ಯ ಇಲ್ಲಿನ ಸ್ಪೆಷಲ್ ಐಟಮ್ಮು?"

ಅವನು "ಖಾರಾಬಾತ್" ಅಂದ. ರಾಗೀಮುದ್ದೆ ದೇವೇಗೌಡರಿಗೆ ಇಟಾಲಿಯನ್ ರೆಸ್ಟೋರೆಂಟಿಗೆ ಹೋದರೆ ಹೇಗಾದೀತೋ ಹಾಗಾಯಿತು ಘಾ ಮಹಾಶಯರಿಗೆ. ಖಾರ ಇದೆ, ಬಾತ್ ಇದೆ! ರುಚಿಕಟ್ಟಾಗಿರುತ್ತೆ ಅಂತ ಮೂರು ಪ್ಲೇಟ್ ಆರ್ಡರ್ ಮಾಡಿದರು. ಮುಂದೆ ಆದದ್ದು ಬರೆದರೆ, ಓದಲು ನಿಮಗೇ ನಾಚಿಕೆಯಾದೀತು ಅಂತ ಇಷ್ಟಕ್ಕೇ ನಿಲ್ಲಿಸಿ ತರ್ಪಣ ಬಿಡುತ್ತೇನೆ!!

Tuesday, July 13, 2010

೧. ಕಾಲ್ಚೆಂಡು ಒದ್ದ ಮೇಲೆ..

ಅಂತೂ ಇಂತೂ ಫುಟ್ಬಾಲ್ ಜ್ವರ ಇಳೀತು. ಯಾಕಿಂಥ ದರಿದ್ರ ಆಟ ಆಡ್ತಾರೋ ಅಂತ ಗೊಣಗಾಡ್ತಾ ಇದ್ದ ಶ್ರೀಮಾನ್ ಜೀಯ ತಲೆನೋವೂ ಇಳೀತು. ಇಷ್ಟು ದಿನ ಟಿವಿಯಲ್ಲಿ ಬಡ್ಕೊಂದಿದ್ದೆ ಬಡ್ಕೊಂಡಿದ್ದು, ಏನು ಬಂತಪ್ಪ ಅವರಿಗೆ ಇದರಿಂದ? ದೊಡ್ಡ ಲೊಳಲೊಟ್ಟೆ ಅಂತ ಕೊನೆಯದಾಗಿ ಗೊಣಗಿ ಸುಮ್ಮನಾದರು.

"ಅಲ್ಲಾ ಸ್ವಾಮಿ, ಒಂದು ಬಾಲಿಗೋಸ್ಕರ ಹುಡುಗರು ಹುಚ್ಚುನಾಯಿ ಬೆನ್ನು ಹತ್ತಿದ ಹಾಗೆ ಯಾಕೆ ಒಡ್ಬೇಕೂ ಅಂತ! ಇದಕ್ಕೊಂದು ಪರಿಹಾರ ಇಲ್ಲವೇ? " ಅಂತ ಜೀಗಳ ಗೆಳೆಯ ಘಾ ಪ್ರಶ್ನೆ.

"ಇದೆ"

"ಏನು?"

"ಒಬ್ಬೊಬ್ಬರಿಗೂ ಒಂದೊಂದು ಬಾಲು ಕೊಟ್ಟು ಬಿಡೋದು", ಜೀ ಉತ್ತರ.

ತುಂಬಾ ಹಳೇ ಜೋಕೇ ಅನ್ನಿ. ಆದರೆ, ಘಾ ಕಾಲಕ್ಕೆ ಅದು ಹೊಸದು. ಆಗ ಈಗಿನಂತೆ ಹೊಸಹೊಸ ತಂತ್ರಜ್ಞಾನಗಳು ಇರಲಿಲ್ಲ. ಯಾವುದೋ ಒಂದು ಸಿಕ್ಕಿದ ನಿಕ್ಕರು ಬನಿಯನು ಹಾಕ್ಕೊಂಡು ಹುಡುಗರು ಮೈದಾನಕ್ಕೆ ಜಿಗಿಯುತ್ತಿದ್ದರು. ಬಾಲು ಹಿಡಿಯುವ ಗೌಜಿನಲ್ಲಿ ತಮ್ಮ ಬಾಲುಗಳಿಗೆ ಅಪಾಯ ತಂದುಕೊಳ್ಳುತ್ತಿದ್ದರು. ಗೋಲು ಕೀಪರು ಒಬ್ಬನೇ ಸಕಲಾಯುಧ ಸನ್ನದ್ಧನಾಗಿ ಸಕಲಕವಚಧಾರಿಯಾಗಿ ನಿಲ್ತಾ ಇದ್ದದ್ದು.

"ಆಡೋರು ಹುಡುಗರು. ನೋಡ್ತಾ ನಿಲ್ಲೋ ಅವನಿಗೇಕೆ ಇಂಥ ವೈಭವರೀ? " ಅಂತ ಘಾ ಕೇಳಿದರೆ, ಜೀ ತುಂಟತನದಿಂದ ಹೇಳೋರು: "ಓಡಾಡೋ ಹುಡುಗರಿಗೆಲ್ಲ ಕೈ-ಕಾಲು ಕವಚಗಳು ಕೊಟ್ರೆ ಅವಕ್ಕೆ ಹಾನಿಯಾಗೊಲ್ಲವೇ? ಅದಕ್ಕೇ ನಿಂತ ಅವನಿಗೆ ಉಡಿಸಿದ್ದಾರೆ."

ಜೀ ಮತ್ತು ಘಾ ಆಟೋಟದ ಯಾವ ತಲೆಬುಡ ಗೊತ್ತಿಲ್ಲದೆ, ಆದರೂ ಅದರ ಜ್ಞಾನ ಚೆನ್ನಾಗಿದೆ ಅಂತ ಫೋಸು ಕೊಟ್ಟುಕೊಂಡು ನೋಡುತ್ತಿದ್ದ ಕಾಲ ಅದು. ಒಂದೊಂದು ಸಲ ಟೀವಿಯಲ್ಲಿ , ಅಪರೂಪಕ್ಕೆ ಅಜ್ಜಿ ಹಡೆದ ಹಾಗೆ, ಫುಟ್-ಬಾಲಿನ ವಿವರ ತೋರಿಸುತ್ತಿದ್ದರು. ಮ್ಯಾಚು ಬಂದರೆ ಕಾಮೆಂಟರಿ ಇಲ್ಲ, ಕಾಮೆಂಟರಿ ಬಂದರೆ ಮ್ಯಾಚಿಲ್ಲ, ಅಂಥಾ ಗತಿ ಆಗಿನ ಕಾಲದ್ದು. ಹಾಗಾಗಿ ಚಿತ್ರಗಳು ಮಾತ್ರ ಮೇಲಿಂದ ಮೇಲೆ ಬರತಿದ್ದವೆ ಹೊರತು ಕಾಮೆಂಟರಿ ಗರಗರ ಉರುಲುತ್ತಿತ್ತು.

ಜೀಯ ಕಣ್ಣುಗುಡ್ಡೆಗಳು ಟಿವಿಯ ಒಳಹೋಗಿ ನಾಟಿಬಿಟ್ಟಿದ್ದವು. ತಾನೇನು ಕಮ್ಮಿ ಅಂತ ಘಾ, ಕತ್ತು ಮುಂಬಾಗಿಸಿ, ದೇಹವನ್ನು ಬಿಲ್ಲಿನಂತೆ ದಂಡಿಸಿ ವಿಚಿತ್ರ ಶೈಲಿಯಲ್ಲಿ ಕೂತು ನೋಡಿದರು. ಎದುರಾಳಿಗಳು ಧುಮ್ಮಿಕ್ಕಿ ಹೊಡೆದ ಬಾಲನ್ನು ಬಕಪಕ್ಷಿಯಂತೆ ಹಾರಿಹಿಡಿದು "ಬಡ್ಡೀಮಕ್ಳಾ ಮಾಡ್ತೀನಿ ನಿಮಗೆ!" ಅಂತ ಗೋಲುಕೀಪರು ಅವಡುಗಚ್ಚಿ ಎತ್ತಿ ಆಚಿನ ಗೋಲಿನತ್ತ ಎಸೆವ ದೃಶ್ಯ.

" !" ಅಂತ ಕುಪ್ಪಳಿಸಿದರು ಜೀ ಹುಜೂರ್.

"ಏನು?"

"ನೋಡ್ರೀ, ಎಂಥಾ ಸಿಕ್ಸರು!"

ಘಾ ಮುಗುಳ್ನಕ್ಕು ಬಯ್ದರು: "ನಿಮ್ ತಲೆ! ಸಿಕ್ಸರು ಬಾರ್ಸೋದು ಫುಟ್-ಬಾಲ್ ನಲ್ಲಿ! ಇದು ಕ್ರಿಕೆಟ್ಟು!"

**********************

ಜೀ ಹುಜೂರ್ ಮಗ ಜೀಮರಿ ಮಹಾನ್ ಫುಟ್-ಬಾಲ್ ಪ್ರೇಮಿ. ಆಟದ ಪಂದ್ಯಗಳು ಶುರುವಾಯ್ತು ಅಂದರೆ ಅವನು ಟೀವಿ ಮುಂದೆ "ಜೀ ಹುಜೂರ್". "ಗೋಲೆಷ್ಟಾಯ್ತೋ?" ಅಂದ್ರೆ "ಅಯ್ಯೋ ಸುಮ್ನೆ ಹೋಗೀಪ್ಪ. ನಿಮಗ್ಯಾಕೆ ಅದರ ಚಿಂತೆ" ಅಂತ ಗದರಿ ಕಳಿಸುತ್ತಾನೆ. ಭಗವದ್ಗೀತೆ ಕವರು ಹಾಕ್ಕೊಂಡು ದೆಬೋನೀರು ಓದಿದ ಹಾಗೆ ಪೋಲಿ ಮುಂಡೆದಕ್ಕೆ ಇರುವ ಯೋಚನೆಗಳೇ ಬೇರೆ. ಫುಟ್-ಬಾಲಿನ ನೆಪದಲ್ಲಿ ಪ್ರೇಕ್ಷಕರಂಗಣದಲ್ಲಿ ಯಾವ ಯಾವ ಬಿಳೀ ಹುಡುಗಿಯರು ಎಷ್ಟೆಷ್ಟು ಇಂಚು ಬಟ್ಟೆ ಹಾಕಿದ್ದಾರೆ ಅಥವ ಹಾಕಿಲ್ಲ, ಎಲ್ಲೆಲ್ಲಿ ಏನೇನು ಇದೆ ಅಥವ ಇಲ್ಲ- ಇವುಗಳನ್ನಷ್ಟೇ ಈತ ಕಣ್ಣಗಲಿಸಿ ನೋಡೋದು ಅಂತ ಗೊತ್ತಿಲ್ಲ ಯಾರಿಗೂ.. ಯಾರೋ ಹೇಳಿದ್ದರಂತೆ: "ಫುಟ್-ಬಾಲ್ ಆಟ ಏನು ಮಜಾ ಇರುತ್ತೆ ಮಾರಾಯ! ಯಾವ ಕ್ಷಣದಲ್ಲಿ ಯಾವ ಮೂಲೆಯಿಂದ ಜನ ಬತ್ತಲೆ ಓಡೋಕೆ ಶುರು ಮಾಡ್ತಾರೋ ಹೇಳಕ್ಕಾಗಲ್ಲ!" ಅಂತ. ಅವತ್ತಿಂದ ಹುಡುಗ ಕಾಲ್ಚೆಂಡು ದಾಸ.

ಜೀಮರಿ ಟೀವಿಯ ಎದುರು ಕೈಕಾಲು ಆಡಿಸ್ತ ಕೂತು ಕಳ್ಳೆಪುರಿ ಜಗಿಯತೊಡಗಿದರೆ, ಅವರಮ್ಮನಿಗೆ ಮೈಯೆಲ್ಲಾ ಉರಿ. "ಮುಂಡೇದು, ಓದು ಬರೆಯೋದೆಲ್ಲ ಬಿಟ್ಟು ಹಾಳು ಪರಂಗಿತಿಕಗಳನ್ನು ನೋಡುತ್ತಲ್ಲ!" ಅಂತ ಬಾಯಗಲಿಸಿ ಬೈತಾರೆ. "ಯಾವ ಹುತ್ತದಲ್ಲಿ ಯಾವ ಹಾವಿರುತ್ತೋ ಹೇಳಕ್ಕಾಗುತ್ಯೆ? ಪ್ಹೇಯ್ಲಿನ ಮೇಲೆ ಪ್ಹೇಯ್ಲಾಗಿ ಬಿದ್ದು ಮಣ್ಣು ಮುಕ್ಕಿದರೂ ಸಚಿನ್ ತೆಂಡೂಲ್ಕರ್ ಕೋಟ್ಯಧೀಶ ಆಗಿಲ್ಲವೇ!" ಅಂತ ಹೊಟ್ಟೆಯ ಬೆಂಕಿಗೆ ತುಪ್ಪ ಸುರಿಯುವವರು ಸುತ್ತಲೂ ಬೇಜಾನ್ ಇರುವುದರಿಂದ ಜೀಮರಿ ಖುಷ್!

"ಅದೂ ಹೌದನ್ನಿ. ಈಗ ಯಾವ ನೀರಲ್ಲಿ ಯಾವ ಆಕ್ತೊಪಸ್ಸೋ ಅಂತ ಹೇಳುವ ಹಾಗಾಗಿದೆ. ನೋಡಿ ಎಂಟು ಕಾಲಿನ ಪ್ರಾಣಿಗೂ ಕಾಲ್ಚೆಂಡಿನ ಆಟಕ್ಕೂ ಎಲ್ಲಿಂದೆಲ್ಲಿಯ ಸಂಬಂಧ. ಆದರೂ, ಈಗ ಅದರ ಭವಿಷ್ಯ - ಆಟದ ದೆಸೆಯಿಂದ ಹೇಗೆ ಎಲ್ಲಿಗೆ ಹೋಗಿ ನಿಂತಿದೆ!" ಅಂತ ಘಾ ಒಗ್ಗರಣೆ ಬೇರೆ!

"ಅದೇನ್ರೀ ಅದು ಆಕ್ತೊಪಸ್ಸು?", ಜೀಗಳು ಸ್ವಲ್ಪ ನಿಧಾನ, ಇಂಥ ವಿಚಾರಗಳಲ್ಲಿ.

"ಅದೇರೀ, ಅಷ್ಟಪದಿ ಅಂತೀವಲ್ಲ ನಾವು. ಹಿಡ್ಕೊಂಡ್ರೆ ಬಿಡಲ್ಲ ಅಂತಾರೆ. ಒಂಥರಾ ವಿಚಿತ್ರ, ಭಯಂಕರ, ರಣಹಿಂಸೆ...."

"ಅಂದರೆ ಸಪ್ತಪದಿ ಥರ ಅನ್ನಿ!"

"ಅಬ್ಬ, ಅರ್ಥ ಆಯ್ತಲ್ಲ ನಿಮಗೆ! ಅಂಥಾದ್ದೆ ಒಂದು ಪ್ರಾಣಿ. ಯಾವ ಮ್ಯಾಚು ಯಾರು ಗೆಲ್ತಾರೆ ಅಂತ ಹೇಳ್ತಂತೆ. ಹೇಳಿದ್ದೆಲ್ಲ ಸರಿಯಾಗಿ, ಅದರ ಲಕ್ಕು ಖುಲಾಯ್ಸಿಬಿಟ್ಟಿದೆ ಕಾಣ್ರೀ!"

"ಸುಳ್ಳು ಹೇಳಿದ್ರೆ ಕಾಲು ಮುರಿಯೋದಿಲ್ವೆ ಜನ!"

"ಅದೂ ಹೌದನ್ನಿ, ನಮ್ಮವರ ಹಾಗಲ್ಲ ಬಿಳೀ ಜನ. ಸುಳ್ಳು ಹೇಳಿದ್ರೆ "ಕಿಕ್ ಬಕೆಟ್" ಮಾಡಿಸ್ತಾರೆ! ನಮ್ಮ ಜೋಯಿಸ್ರೂ ಯಾರೋ ಒಬ್ರು ಫುಟ್-ಬಾಲ್ ಭವಿಷ್ಯ ಹೇಳ್ತೀನಿ ಅಂತ ಬಂದ್ರು. ಎಂದೆರಡು ಹೇಳಿದ್ರು ಕೂಡ. ಯಾಕೋ ಹೇಳಿದ್ದು ಉಲ್ಟಾ ಹೊಡೆದಮೇಲೆ, ಕೆಲವೊಂದು ಗ್ರಹಗಳು ಜಾತಕದಲ್ಲಿ ಸರಿಯಾಗಿ ಕಾಣಿಸ್ತಿಲ್ಲ" ಅಂತ ತಿಪ್ಪೆ ಸಾರಿಸಿ ಮೌನವೃತ ಮಾಡಿದ್ರು"

"ಹಾಗೂ ಇರಬಹುದು ಬಿಡಿ. ಇಲ್ಲಿನ ಗ್ರಹಗಳೇ ಬೇರೆ, ಪರಂಗಿ ದೇಶದ ಗ್ರಹಗಳೇ ಬೇರೆ. ಅಲ್ವೇ!" ಅಂತ ಜೀ ಸಮಜಾಯಿಷಿ. ಜೀಗೆ ಜಾತಕ, ಕುಂಡಲಿಯಲ್ಲೆಲ್ಲ ಬಹಳ ನಂಬಿಕೆ; ಗೌಡರಿಗೆ ಕೊಲ್ಲೂರಮ್ಮನ ಮೇಲೆ ಇದ್ದ ಹಾಗೆ.

"ಅಲ್ಲಾ ಒಂದು ಮಾತು ಹೇಳ್ತೀನಿ. ದೇಶದಲ್ಲಿ ನೂರಿಪ್ಪತ್ತು ಕೋಟಿ ಜನ ಇದೀವಿ. ಒಂದು ಫುಟ್-ಬಾಲ್ ಟೀಮ್ ಕಟ್ಟೋ ಹನ್ನೆರಡು ಜನ ಸಿಗಲ್ಲವೇ? ನಾಚಿಕೆಗೇಡು!" ಅಂದರು ಘಾ. ಅವರು ಉಗ್ರ ರಾಷ್ಟ್ರವಾದಿ. ಯಾವುದೇ ಇರಲಿ, ಅದು ಪ್ರಸಿದ್ಧವಾದರೆ, ಅದು ನಮ್ಮದೇಶದಲ್ಲೂ ಇರಬೇಕು ಅನ್ನುವ ಅಭಿಪ್ರಾಯ ಅವರದ್ದು.

"ಆಡೋರು ಇದ್ದಾರೆ. ಆದರೆ ಆಡಕ್ಕೆ ಜನ ಬಿಡಬೇಕಲ್ಲ!" ಅಂತ ಜೀ ವಾದ.

"ಅದ್ ಹೇಗ್ರೀ ಹೇಳ್ತೀರಾ? ಆಡ್ತೀನಿ ಅಂದ್ರೆ ತಡೆಯೋರು ಯಾರು?", ಘಾ ಹುಬ್ಬು ಪ್ರಶ್ನಾರ್ಥಕ.

"ಅದ್ಯಾರೋ ಸ್ವಾಮಿಗಳು ಫುಟ್-ಬಾಲ್ ಆಡಕ್ಕೆ ಹೋಗೀ.."

"ಥೂ ನಿಮ್ಮ! ಅದಲ್ರೀ. ನಾನ್ ಹೇಳ್ತಾ ಇರೋದು ನಿಜವಾದ ಆಟ, ಮೈದಾನದಲ್ಲಿ.."

"ನಾನೂ ಅದನ್ನೇ ಹೇಳ್ದೆ ತಾನೇ?"

"ಮೈ-ದಾನ ಅಲ್ಲ! ಮೈದಾನರೀ.. ಥೂ ನಿಮ್ಮ ಪೋಲಿ ತಲೆಗೊಂದಿಷ್ಟು ಬೆಂಕಿ ಹಾಕ!", ಘಾ ಉಗಿದು ಎದ್ದು ಟೀವಿಯಲ್ಲಿ ನ್ಯೂಸ್ ಚಾನೆಲ್ ತಿರುಗಿಸಿ ಕೂತರು.

"ವಕ ವಕ ವಕ" ಅಂತ ಶಕೀರ ಹೊಟ್ಟೆ ತೋರಿಸಿ ಸೊಂಟ ತಿರುಗಿಸುವ ಹಾಡು ಬಂತು. "ಮುಂದಿನ ಆಯ್.ಪಿ.ಎಲ್. ಮ್ಯಾಚಿಗೆ ನಮ್ಮಲ್ಲೂ ಹೀಗೆ ಒಂದು ಹಾಡು ಹಾಕಿಸಿ ಕುಣಿಸ್ತಾರಂತೆ" ಅಂದ ಜೀಮರಿ ಖುಷಿಯಾಗಿ.

"ಯಾರಿಂದಪ್ಪ? ಹುಡುಗಿಯಿಂದಾನೆ?"

"ಅಲ್ಲ, ನಮ್ಮಲ್ಲಿ ಇಲ್ಲವೇ ಶಕೀಲ? ಅವಳ ಮುಂದೆ ಶರೀರ ಯಾವ ಲೆಕ್ಕ!" ಅಂತ ಕಿಚಾಯಿಸಿ ಓಡಿತು ಮರಿ.

ಗೊಳಗೊಳ ನಕ್ಕು " ಹುಡುಗರು ಎಷ್ಟು ಫಾಸ್ಟ್ ನೋಡಿ!" ಅಂತ ಮೆಚ್ಚುಗೆ ಸೂಚಿಸಿ ಘಾ, ಟೀವಿ- ಹಾಕಿದರು. ನಾಳೆ ಆಗುವ ದುರಂತಗಳನ್ನೂ ಇವತ್ತೇ ತೋರಿಸಿ ಬೆಚ್ಚಿಬೀಳಿಸುವ ಅಚ್ಚಕನ್ನಡದ ವಾರ್ತಾವಾಹಿನಿ ಇದು. ಅಲ್ಲಿ ಅವರು ಶಿಲ್ಪಾ ಶೆಟ್ಟಿಯ ಸಂದರ್ಶನ ಮಾಡುತ್ತಿದ್ದರು. ಆಕೆ ತನ್ನ ಯೋಗಸಿದ್ಧ ದೇಹವನ್ನು ಬಳ್ಳಿಯಂತೆ ಬಳುಕಿಸುತ್ತ "ಆಕ್ತೊಪಸ್ಸ್! ಯಂಕ್ಲಾ ಅಂಚಿತ್ತಿನ ಒಂಜಿ ಜೆಂಜಿ ಬೋಡು. ಕುಡ್ಲ
ಡ್ ಸಿಕ್ಕುಂಡ ತೂವೊಡು" ಎಂದು ಮೈಕ್ ಮುಂದೆ ಹೇಳಿ ಕಿಲಕಿಲ ನಕ್ಕಳು. ತುಳು ಬರುವ ಘಾ ಹೊಟ್ಟೆ ಹಿಡಕೊಂಡು "ಘಾ ಘಾ" ನಕ್ಕರು. ತುಳು ಬರದ ಜೀ ಅವರ ಮುಖ ನೋಡಿ ಪೆಚ್ಚಾಗಿ ಕೂತರು.
**********************************************************